ಪಾಕಿಸ್ತಾನ-ಭಾರತ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮಾತನಾಡಿದ್ದು, ದ್ವಿಪಕ್ಷೀಯ ಮಾತುಕತೆ ಪ್ರಾರಂಭಿಸಲು ಇದೇ ಸೂಕ್ತ ಸಮಯ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನ್ನು ಪಾಕ್ ಸೇನೆಯ ನೆರಳು ಎಂದು ಹೇಳಿರುವ ಮೆಹಬೂಬಾ ಮುಫ್ತಿ, ಈ ಸಮಯದಲ್ಲಿ ಮಾತುಕತೆ ನಡೆಸಿದರೆ ಅದು ಫಲಪ್ರದವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಮ್ರಾನ್ ಖಾನ್ ಭಾರತದೊಂದಿಗೆ ಮಾತುಕತೆ ನಡೆಸುವುದಕ್ಕೆ ಸಿದ್ಧ, ಕಾರಿಡಾರ್ ಗಳನ್ನು ತೆರೆಯುವುದಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಪಾಕ್ ಸೇನೆಯ ಪ್ರತಿನಿಧಿಯೆಂದೇ ಹೇಳಲಾಗುತ್ತಿರುವ ಇಮ್ರಾನ್ ಖಾನ್ ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎನ್ನುತ್ತಿದ್ದಾರೆಂದರೆ ಪಾಕ್ ಸೇನೆಯೂ ಸಹ ಮಾತುಕತೆಗೆ ಮುಕ್ತವಾಗಿದೆ ಎಂದೇ ಅರ್ಥ ಇರಬಹುದು ಎಂದು ಅಜೆಂಡಾ ಆಜ್ ತಕ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಪರ್ವೇಜ್ ಮುಷರಫ್ ಅವಧಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಗಡಿಯಲ್ಲಿ ಕದನ ವಿರಾಮಕ್ಕೆ ಚಾಲನೆ ನೀಡಲಾಯಿತು ಹಾಗೂ ಮುಜಾಫರ್ ಬಾದ್ ಮಾರ್ಗವನ್ನು ತೆರೆಯಲಾಯಿತು. ಈಗಲೂ ಸಹ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಬಹುದು ಎಂದು ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.