ಬೃಂದಾವನ: ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧ ಮಾಡಿದಾಗಿನಿಂದ ಬೀದಿ ದನಗಳು ಹೆಚ್ಚಾಗಿದ್ದು, ಶ್ರೀಕೃಷ್ಣನ ಜನಿಸಿದ ಮಥುರಾದಲ್ಲಿ ಬೀದಿ ದನಗಳ ಸುತ್ತಾಟವನ್ನು ತಡೆಗಟ್ಟಲು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಜನರು ಆಗ್ರಹಿಸುತ್ತಿದ್ದಾರೆ.
ಮಥುರಾದಲ್ಲಿ ಈಗಾಗಲೇ 100 ಖಾಸಗಿ ಗೋಶಾಲೆಗಳಿದ್ದು, ಬಹುತೇಕ ಎಲ್ಲಾ ಗೋಶಾಲೆಗಳೂ ತುಂಬಿವೆ. ರಾಧಾಕುಂಡ್ ನಲ್ಲಿ ಜರ್ಮನಿಯ ಮಹಿಳೆಯೊಬ್ಬರು 1,700 ಗೋವುಗಳು ಹಾಗೂ ಹೋರಿಗಳನ್ನೊಳಗೊಂಡ ಗೋಶಾಲೆ ನಡೆಸುತ್ತಿದ್ದಾರೆ.
ಬೃಂದಾವನಕ್ಕೆ ಈಗ ತುರ್ತಾಗಿ ಪಶು ಆಸ್ಪತ್ರೆ ಬೇಕಾಗಿದೆ. ಗಯಾಗೊಂಡಿರುವ ಹಸುಗಳಿಗೆ ಚಿಕಿತ್ಸೆ ಕೊಡಿಸುತ್ತಿರುವ ಗೋಶಾಲೆಗೆ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಬೃಂದಾವನದ ಅಧಿಕಾರಿಗಳು ತಿಳಿಸಿದ್ದಾರೆ.
ಜನಸಂದಣಿ ಹೆಚ್ಚಿದ್ದ ಮಾರುಕಟ್ಟೆ ಪ್ರದೇಶಗಳಿಗೂ ಸಹ ಬೀದಿಯಲ್ಲಿ ತಿರುಗುವ ಹಸುಗಳು ದಾಂಗುಡಿ ಇಡುತ್ತಿದ್ದು, ಇತ್ತೀಚೆಗಷ್ಟೇ ಗೂಳಿ ತಿವಿತಕ್ಕೆ ಓರ್ವ ಹಿರಿಯ ನಾಗರಿಕ ಮೃತಪಟ್ಟಿದ್ದರೆ ಹಲವರಿಗೆ ಗಾಯ ಉಂಟಾಗಿತ್ತು. ಸಿಕಂದ್ರಾ ಹಾಗೂ ತಾಜ್ ಮಹಲ್ ಬಳಿ ಗೂಳಿಗಳು ಪ್ರವಾಸಿಗರಿಗೂ ತಿವಿಯುತ್ತಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದು ಬೀದಿ ದನಗಳ ಸುತ್ತಾಟವನ್ನು ತಡೆಗಟ್ಟಲು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ.