2019 ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧದ ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿ ವಿರುದ್ಧ ತೀವ್ರ ವಾಗ್ದಾಳಿಗೆ ಮುಂದಾಗಿದ್ದು, ಕಾಂಗ್ರೆಸ್ ನೇತೃತ್ವದಲ್ಲಿ ಮಹಾ ಮೈತ್ರಿ ರಚನೆಯಾಗುತ್ತಿರುವುದು ಜನತೆಯ ಆಶೋತ್ತರಗಳಿಗಾಗಿ ಅಲ್ಲ, ವೈಯಕ್ತಿಕ ಲಾಭಕ್ಕಾಗಿ ಎಂದು ಆರೋಪಿಸಿದ್ದಾರೆ.
ಚೆನ್ನೈ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಮೋದಿ, ಇಂದು ಹಲವು ನಾಯಕರು ಮಹಾಘಟಬಂಧನದ ಬಗ್ಗೆ ಮಾತನಾಡುತ್ತಿದ್ದಾರೆ, ಈ ಮೈತ್ರಿ ವೈಯಕ್ತಿಕ ಅಸ್ಥಿತ್ವಕ್ಕಾಗಿ ರಚನೆಯಾಗುತ್ತಿರುವ ಮೈತ್ರಿ, ಸೈದ್ಧಾಂಕಿಕ ಬೆಂಬಲಕ್ಕಾಗಿ ರಚನೆಯಾಗುತ್ತಿರುವ ಮೈತ್ರಿ, ಅಧಿಕಾರಕ್ಕಾಗಿ, ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವ ಮೈತ್ರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದ್ಲಲಿರುವ ಹಲವು ನಾಯಕರು ಲೋಹಿಯ ಆವರಿಂದ ಸ್ಪೂರ್ತಿ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಅದರೆ ಲೋಹಿಯಾ ಅವರೇ ಸ್ವತಃ ಕಾಂಗ್ರೆಸ್ ನ್ನು ವಿರೋಧಿಸಿದ್ದರು. ಕಾಂಗ್ರೆಸ್ ನ ಮನಸ್ಥಿತಿ ಯಾರನ್ನೂ ಬಿಟ್ಟಿರಲಿಲ್ಲ. ಕಾಂಗ್ರೆಸ್ ಎಂಜಿ ರಾಮಚಂದ್ರನ್ ಅವರ ನೇತೃತ್ವದ ಎಐಎಡಿಎಂಕೆ ಸರ್ಕಾರವನ್ನು ಜನಬೆಂಬಲ ಇದ್ದರೂ 1980 ರಲ್ಲಿ ಅಸ್ಥಿರಗೊಳಿಸಿತ್ತು, ಕಾಂಗ್ರೆಸ್ ಗೆ ವಿರುದ್ಧವಾಗಿ ತೆಲುಗು ದೇಶಂ ಪಕ್ಷ ಸ್ಥಾಪಿಸಿದ್ದ ಎನ್ ಟಿ ರಾಮ ರಾವ್ ಅವರ ಪಕ್ಷದವರು ಈಗ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಲು ಮುಂದಾಗಿದ್ದಾರೆ ಎಂದು ಮೋದಿ ಕಾಂಗ್ರೆಸ್ ಹಾಗೂ ಮಹಾಮೈತ್ರಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.