ಚೆನ್ನೈ: ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಬೆಳ್ಳಿ ವಸ್ತುಗಳು ನಾಪತ್ತೆಯಾಗಿದೆ ಎಂದು ದೂರಿದ್ದ ಮಹಿಳೆ 1.5 ಲಕ್ಷ ರೂ. ಪರಿಹಾರ ನೀಡುವಂತೆ ಗ್ರಾಹಕರ ರಕ್ಷಣಾ ವೇದಿಕೆ ಇಂಡಿಯನ್ ಬ್ಯಾಂಕ್ ಗೆ ಸೂಚನೆ ನೀಡಿದೆ.
ಮೂಲಗಳ ಪ್ರಕಾರ ಚೆನ್ನೈನ ರಾಪುರಂ ನಿವಾಸಿ ಲಕ್ಷ್ಮೀ ಜಯರಾಮನ್ ಎಂಬುವವರು 2006ರಲ್ಲಿ ಇಂಡಿಯನ್ ಬ್ಯಾಂಕ್ ನ ರಾಪುರಂ ಬ್ರಾಂಚ್ ನಲ್ಲಿ ಸುಮಾರು 7.29 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ಲಾಕರ್ ನಲ್ಲಿಟ್ಟಿದ್ದರು. ಬಳಿಕ 2006ರ ಅಕ್ಟೋಬರ್ ನಲ್ಲಿ ಲಾಕರ್ ತೆರೆದಾಗ ಅಲ್ಲಿದ್ದ ಬೆಳ್ಳಿ ಆಭರಣಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಲಾಕರ್ ಕೀ ನಿಮ್ಮಲ್ಲೇ ಇರುತ್ತದೆ. ಹೀಗಾಗಿ ಲಾಕರ್ ತೆರೆದು ಕಳವು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಬ್ಯಾಂಕ್ ಅಧಿಕಾರಿಗಳ ಮಾತಿಗೆ ಅಸಮಾಧಾನಗೊಂಡ ಲಕ್ಷ್ಮೀ ಜಯರಾಮನ್ ಅವರು ಇಂಡಿಯನ್ ಬ್ಯಾಂಕ್ ನ ಮ್ಯಾನೇಜರ್ ಪತ್ರಬರೆದಾಗ ಅವರಿಂದಲೂ ಇಂತಹುದೇ ಉಡಾಫೆಯ ಉತ್ತರ ಬಂದಿದೆ. ಈ ವೇಳೆ ಬ್ಯಾಂಕ್ ವಿರುದ್ಧ ಅಸಮಾಧಾನಗೊಂಡ ಅವರು, ಅಹ್ಮದಾಬಾದ್ ಮೂಲದ ಗ್ರಾಹಕ ರಕ್ಷಣೆಯ ಎನ್ ಜಿಒ ಅನ್ನು ಸಂಪರ್ಕಿಸಿದ್ದು, ಈ ವೇಳೆ ಲಕ್ಷ್ನೀ ಜಯರಾಮನ್ ಅವರ ಪರವಾಗಿ ಎನ್ ಜಿಒ ಆರ್ ಬಿಐಗೆ ಪತ್ರವೊಂದನ್ನು ಬರೆದಿದೆ. ಪತ್ರಕ್ಕೆ 2008ರ ಫೆಬ್ರವರಿ 22ರಂದು ಉತ್ತರ ಬರೆದಿದ್ದ ಆರ್ ಬಿಐ ನಿಮ್ಮ ದೂರನ್ನು ಸ್ಥಳೀಯ ಗ್ರಾಹಕರ ರಕ್ಷಣಾ ವೇದಿಕೆಗೆ ವರ್ಗಾಯಿಸಲಾಗಿದೆ ಎಂದು ಪತ್ರದ ಮೂಲಕ ತಿಳಿಸಿದೆ.
ಇನ್ನು ಗ್ರಾಹಕರ ರಕ್ಷಣಾ ವೇದಿಕೆಯಲ್ಲಿ ದೂರಿನ ವಿಚಾರಣೆ ನಡೆದಿದ್ದು, ಈ ವೇಳೆ ಬ್ಯಾಂಕ್ ಲಾಕರ್ ನಲ್ಲಿದ್ದ ಬೆಳ್ಳಿ ಆಭರಣ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ ಈ ಸಂಬಂಧ ಬ್ಯಾಂಕ್ ನಿಂದಲೇ ಲೋಪವಾಗಿದೆ ಎಂದು ಗ್ರಾಹಕರ ರಕ್ಷಣಾ ಕೋರ್ಟ್ ಅಭಿಪ್ರಾಯಪಟ್ಟಿದ್ದು, ಕೂಡಲೇ ಸಂತ್ರಸ್ಥ ಮಹಿಳೆ ಲಕ್ಷ್ಮೀ ಜಯರಾಮನ್ ಅವರಿಗೆ 1.5 ಲಕ್ಷ ರೂ ಪರಿಹಾರ ನೀಡುವಂತೆ ಆದೇಶ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಸಿಇಆರ್ ಎಸ್ ಮುಖ್ಯಸ್ಥ ಎಂ ಮೋನಿ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದು, ಇಂಡಿಯನ್ ಬ್ಯಾಂಕ್ ಕೂಡಲೇ ಲಕ್ಷ್ಮೀ ಜಯರಾಮನ್ ಅವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಇದಲ್ಲದೆ 15 ಸಾವಿರ ರೂ ಹಣವನ್ನು ಮಾನಸಿಕ ಸಂಕಟ ಆಧಾರದ ಮೇಲೆ ನೀಡುವಂತೆ ಆದೇಶಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos