ಕಾನ್ಪುರ: ಉತ್ತರ ಪ್ರದೇಶದ ಉನ್ನಾವ್ ಗ್ರಾಮದ ಒಂದೇ ಸಿರಿಂಜ್ ಬಳಕೆ ಪರಿಣಾಮ ಗ್ರಾಮಸ್ಥರಿಗೆ ಹೆಚ್ ಐವಿ ಸೋಂಕು ಹರಡಿರುವ ಪ್ರಕರಣ ಸಂಬಂಧ ನಕಲಿ ವೈದ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುವದಾಗಿ ಆರೋಗ್ಯ ಇಲಾಖೆ ಭರವಸೆ ನೀಡಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಉತ್ತರ ಪ್ರದೇಶ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು, ಹೆಚ್ ಐವಿ ಸೋಂಕು ಪತ್ತೆ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಥಮಿಕ ತನಿಖೆಯಲ್ಲಿ ವೈದ್ಯನೆಂದು ಹೇಳಿಕೊಂಡಿದ್ದವನ ಬಳಿ ಯಾವುದೇ ರೀತಿಯ ಅಧಿಕೃತ ಪರವಾನಗಿ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅಂತೆಯೇ ಹೆಚ್ ಐವಿ ಸೋಂಕು ಪೀಡಿತ ಗ್ರಾಮಸ್ಥರಿಗೆ ಗ್ರಾಮದಲ್ಲೇ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಗ್ರಾಮಕ್ಕೆ ಹೊಂದಿಕೊಂಡಂತೆ ಹೆದ್ದಾರಿ ಇದ್ದು, ಇಲ್ಲಿ ಚಲಿಸುವ ಟ್ರಕ್ ಚಾಲಕರು ವೈದ್ಯನ ಬಳಿ ಚಿಕಿತ್ಸೆ ಪಡೆದಿರುವ ಸಾಧ್ಯತೆ ಇದ್ದು, ಇದೇ ಸಿರಿಂಜ್ ಅನ್ನೇ ಗ್ರಾಮಸ್ಥರ ಚಿಕಿತ್ಸೆಗೂ ಬಳಕೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಮುಂದಿನ ಕಾರ್ಯಾಚರಣೆಗಳ ಕುರಿತು ವೈದ್ಯಾಧಿಕಾರಿಗಳೊಂದಿಗೆ ಚರ್ಚಿದೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಪರಾರಿಯಾಗಿರುವ ಯಡವಟ್ಟು ನಕಲಿ ವೈದ್ಯ
ಇನ್ನು ಪ್ರಕರಣ ಬಯಲಾಗುತ್ತಿದ್ದಂತೆಯೇ ಯಡವಟ್ಟು ನಕಲಿ ವೈದ್ಯ ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ.