'ಕಥಕ್ಕಳಿ ಪ್ರವೀಣ' ವಾಸುದೇವನ್ ನಾಯರ್
ಕೊಲ್ಲಂ: ಭಾರತದ ಖ್ಯಾತ ಕಥಕ್ಕಳಿ ನೃತ್ಯ ತಜ್ಞ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ವಾಸುದೇವನ್ ನಾಯರ್ ಅವರು ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಕೇರಳದ ಕೊಲ್ಲಂನಲ್ಲಿ ಬುಧವಾರ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾದವೂರ್ ವಾಸುದೇವನ್ ನಾಯರ್ ಅವರು, ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡುತ್ತಿದ್ದರು, ಈ ವೇಳೆ ಆಯಾಸದಿಂದ ಬಳಸಿದ ಅವರು ಅಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆ ದಾಖಲಿಸಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಅವರು ಇಹಲೋಕ ತ್ಯಜಿಸಿದ್ದರು.
ಕೊಲ್ಲಂ ನಲ್ಲಿರುವ ಅಗಸ್ತ್ಯಕೂಡ್ ನ ಮಹಾದೇವ ದೇಗುಲದಲ್ಲಿ ನಿನ್ನೆ ರಾತ್ರಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರ್ಯಕ್ರಮದಲ್ಲಿ ನಾಯರ್ ಅವರು ರಾಮಾಯಣದ ರಾವಣ ವೇಷಧಾರಿಯಾಗಿ ಕಾರ್ಯಕ್ರಮ ನೀಡುತ್ತಿದ್ದರು. ರಾತ್ರಿ 10.30ಕ್ಕೆ ಕಾರ್ಯಕ್ರಮ ಆರಂಭವಾಯಿತಾದರೂ, 10.40ರಲ್ಲಿ ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡುವಾಗ ನಾಯರ್ ಕುಸಿದು ಬಿದ್ದರು. ಆಯೋಜಕರು ಕಾರಿನಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಅಷ್ಟು ಹೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ನಾಯರ್ ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮಾಧವನ್ ನಾಯರ್ ಅವರ ಸಾವಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಮಾಲಿವುಡ್ ನ ಖ್ಯಾತ ನಾಮ ಕಲಾವಿದರು ಕಂಬನಿ ಮಿಡಿದಿದ್ದು, ಕೇರಳ ನೃತ್ಯ ಕಲಾವಿದರ ಸಂಘ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದೆ.
ಕಥಕ್ಕಳಿ ಪ್ರವೀಣರಾಗಿದ್ದ ಮಾಧವನ್ ನಾಯರ್ ಅವರು 2011ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಂತೆಯೇ 1997ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದರು. ಅಲ್ಲದೆ ಕೇರಳ ಸರ್ಕಾರ ನೀಡುವ ಕೇರಳ ಕಲಾ ಮಂಡಲಂ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ನಾಯರ್ ಭಾಜನರಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos