ನವದೆಹಲಿ: ಮಹಾಶಿವರಾತ್ರಿ ನಿಮಿತ್ತ ಮಂಗಳವಾರ ಭಕ್ತರು ಶಿವನ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದು, ಶಿವನ ದೇಗುಲಗಳಲ್ಲಿ ಭಕ್ತರ ಸಾಗರವೇ ಹರಿದು ಬರುತ್ತಿದೆ.
ದೇಶದ ಪ್ರಮುಖ ಶಿವನ ದೇಗುಲಗಳಾದ ಕೇದಾರನಾಥ, ಕಾಶಿ ವಿಶ್ವನಾಥ, ದಿಯೋಘಡ್ ನ ಬೈದ್ಯನಾಥ ದೇಗುಲ, ಓಂಕಾರೇಶ್ವರ ದೇಗುಲ, ಕುಲ್ದಾಬಾದ್ ನ ಗ್ರಿಶ್ನೇಶ್ವರ ದೇಗುಲ, ಸೋಮನಾಥೇಶ್ವರ ದೇಗುಲ, ಶ್ರೀಶೈಲಂನ ಮಲ್ಲಿಕಾರ್ಜುನ ದೇಗುಲಗಳಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಗುತ್ತಿದೆ. ಅಂತೆಯೇ ಮಧ್ಯ ಪ್ರದೇಶದ ಉಜ್ಜೈನ್ ಮಹಾಕಾಳೇಶ್ವರ ದೇಗುದಲ್ಲಿ ಭಸ್ಮಾರತಿ ಪೂಜೆ ನಡೆಸಲಾಗಿದ್ದು, ಪುಣೆಯ ಭೀಮಶಂಕರ ದೇಗುಲ, ಮುಂಬೈನ ಬಬುಲ್ ನಾಥ್ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ.
ಶಿವನ ಭಕ್ತರು ಸಾಲುಗಟ್ಟಿ ದೇಗಲುಗಳಲ್ಲಿ ಶಿವನ ದರ್ಶನಕ್ಕೆ ನಿಂತಿದ್ದು, ಹಲವು ದೇಗುಲಗಳಲ್ಲಿ ಭಕ್ತರಿಗೆ ವಿಶೇಷ ಪ್ರಸಾದ ವಿನಿಯೋಗ ಕೂಡ ಮಾಡಲಾಗುತ್ತಿದೆ.
ಇನ್ನು ಕರ್ನಾಟಕದಲ್ಲೂ ಹಲವು ಶಿವನ ದೇಗುಲಗಳು ಬೆಳಗಿನಿಂದಲೇ ಭಕ್ತರಿಂದ ತುಂಬಿ ತುಳುಕುತ್ತಿದ್ದು, ಬೆಂಗಳೂರಿನ ಕಾಡು ಮಲ್ಲೇಶ್ವರ ದೇಗುಲ, ಗವಿಪುರಂ ಗವಿಗಂಗಾಧರೇಶ್ವರ ದೇಗುಲಗಳಲ್ಲಿ ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಅಂತೆಯೇ ಕರ್ನಾಟಕದ ಪ್ರಸಿದ್ಧ ಕೋಟಿ ಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದ್ದು, ಬೆಳಗಿನಂದಲೇ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಶಿವನ ದರ್ಶನ ಪಡೆಯುತ್ತಿದ್ದಾರೆ.