ತಿರುವನಂತಪುರಂ: ಕೇರಳದಲ್ಲಿ ಯೂತ್ ಕಾಂಗ್ರೆಸ್ ಮುಂಖಡನೋರ್ವನನ್ನು ದುಷ್ಕರ್ಮಿಗಳು ಹತ್ಯೆ ಗೈದಿದ್ದು, ಎಡಪಂಥೀಯ ಕಾರ್ಯಕರ್ತರ ಮೇಲೆ ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೇರಳದ ಕಣ್ಣೂರಿನಲ್ಲಿ ಹತ್ಯಾ ರಾಜಕೀಯ ಮುಂದುವರೆದಿದ್ದು, ನಿನ್ನೆ ಯೂತ್ ಕಾಂಗ್ರೆಸ್ ಮುಖಂಡ 30 ವರ್ಷದ ಶುಹೈಬ್ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆ ಗೈದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕಣ್ಣೂರಿನಲ್ಲಿ ಸ್ಥಳೀಯ ಯೂತ್ ಕಾಂಗ್ರೆಸ್ ಮುಖಂಡ ಹಾಗೂ ಆತನ ಮತ್ತೋರ್ವ ಸ್ನೇಹಿತ ಮಾತನಾಡುತ್ತಿದ್ದಾಗ, ಅಲ್ಲಿಗೆ ಆಗಮಿಸಿದ ದುಷ್ಕರ್ಮಿಗಳು ಅವರತ್ತ ನಾಡಬಾಂಬ್ ಎಸೆದು ಬಳಿಕ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ 30 ವರ್ಷದ ಶುಹೈಬ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಅಲ್ಲಿ ಶುಹೈಬ್ ಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ರವಾನೆ ಮಾಡುವಾಗ ಶುಹೈಬ್ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಸಿಕೊಂಡಿರುವ ಕುಣ್ಣೂರು ಪೊಲೀಸರು ಸ್ಥಳೀಯ ಸಿಪಿಐಎಂ ಕಾರ್ಯಕರ್ತರ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಇದೇ ಕಣ್ಣೂರಿನಲ್ಲಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆಗೈಯ್ಯಲಾಗಿತ್ತು. ಈ ವೇಳೆ ಇಲ್ಲಿ ವ್ಯಾಪಕ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಿತ್ತು.