ಬರ್ವಾನಿ: ವಿಷಯುಕ್ತ ಕಿಚಡಿ ತಿಂದು 1,500ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ತರಾಗಿರುವ ಘಟನೆ ಮಂಗಳವಾರ ನಡೆದಿದೆ.
ಮಹಾಶಿವರಾತ್ರಿ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಬರ್ವಾನಿ ಎಂಬ ಪ್ರದೇಶದಲ್ಲಿ ನಿನ್ನೆ ಭಕ್ತರಿಗೆ ಕಿಚಡಿ ನೀಡಲಾಗಿತ್ತು. ಕಿಚಡಿ ತಿಂದ ಕೆಲವೇ ನಿಮಿಷಗಳಲ್ಲಿ ಜನರಿಗೆ ಹೊಟ್ಟೆನೋವು ಹಾಗೂ ನಿರ್ಜಲೀಕರಣ ಸಮಸ್ಯೆಗಳು ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಅಸ್ವಸ್ತರಾಗಿದ್ದ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ, ಪ್ರಸ್ತುತ ಪರಿಸ್ಥಿತಿ ನಿಯಂತ್ರಕ್ಕೆ ಬಂದಿದೆ. ಘಟನೆ ನಡೆದ ಕೂಡಲೇ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಅಸ್ವಸ್ತಗೊಂಡ ಜನರನ್ನು ಜಿಲ್ಲಾಸ್ಪತ್ರೆ ಕರೆತರುವಂತೆ ಸೂಚಿಸಲಾಗಿತ್ತು. ಪರಿಸ್ಥಿತಿ ನಿಭಾಯಿಸಲು ಎರಡು ಖಾಸಗಿ ಆಸ್ಪತ್ರೆಗಳು ಸಹಾಯಕ್ಕೆ ಬಂದಿದ್ದವು ಎಂದು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ತಿಳಿಸಿದ್ದಾರೆ.