ನವದೆಹಲಿ: ದೆಹಲಿ ಪೊಲೀಸರು ಶಂಕಿತ ಇಂಡಿಯನ್ ಮುಜಾಹಿದೀನ್ (ಐಎಂ) ಭಯೋತ್ಪಾದಕನನ್ನು ಬಂಧಿಸಿದ್ದಾರೆ. 2008ರ ಬಾತ್ಲಾ ಹೌಸ್ ಎನ್ ಕೌಂಟರ್ ಪ್ರಕರಣದಲ್ಲಿ ಬೇಕಾದವನಾಗಿದ್ದ ಭಯೋತ್ಪಾದಕ ಅರಿಜ್ ಖಾನ್ ನನ್ನು ದೆಹಲಿ ಪೋಲೀಸ್ ಸ್ಪೆಷಲ್ ಸೆಲ್ ನ ಅಧಿಕಾರಿಗಳು ಬಂಧಿಸಿದ್ದಾರೆ.
ಖಾನ್ ಬಾಟ್ಲಾ ಹೌಸ್ ನಲ್ಲಿ ತನ್ನ ಇತರೇ ನಾಲ್ವರು ಸಹಚರರೊಡನೆ ಹಾಜರಿದ್ದು ಪೋಲೀಸ್ ಎನ್ ಕೌಂಟರ್ ಸಮಯದಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳಲು ಸಮರ್ಥನಾಗಿದ್ದನು.
ಸೆಪ್ಟೆಂಬರ್ 19, 2008ರಲ್ಲಿ ದೆಹಲಿಯ ಜಾಮಿಯಾ ನಗರದಲ್ಲಿ ನಡೆದಿದ್ದ ಎನ್ ಕೌಂಟರ್ ನಲ್ಲಿ ಇಬ್ಬರು ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕರು ಹತರಾಗಿ ಅನೇಕ ಮಂದಿ ಬಂಧಿತರಾಗಿದ್ದರು.
ಪೊಲೀಸ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಎನ್ ಕೌಂಟರ್ ಸ್ಪೆಷಲಿಸ್ಟ್ ಇನ್ಸ್ ಪೆಕ್ಟರ್ ಮೋಹನ್ ಚಂದ್ ಶರ್ಮಾ ಸಹ ಈ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಜೂಲೈ 2013 ರಲ್ಲಿ ವಿಚಾರಣಾ ನ್ಯಾಯಾಲಯವು ಇಂಡಿಯನ್ ಮುಜಾಹಿದೀನ್ (ಐಎಂ) ಭಯೋತ್ಪಾದಕ ಶಾಹಝಾದ್ ಅಹಮದ್ ನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಶಾಹಝಾದ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಆ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಉಳಿದಿದೆ.