ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ವಂಚನೆ ಪ್ರಕರಣದ ತನಿಖೆ ಮುಂದುವರೆದಿರುವಂತೆಯೇ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದ್ದು, ಪ್ರಕರಣದ ಸಂಬಂಧ ಬಂಧನಕ್ಕೀಡಾಗಿರುವ ಬ್ಯಾಂಕ್ ನ ನಿವೃತ್ತ ಅಧಿಕಾರಿಯೊಬ್ಬರು ನೀರವ್ ಮೋದಿ ಸಂಸ್ಥೆಯ ಸಿಬ್ಬಂದಿಗೆ ಬ್ಯಾಂಕ್ ಕಂಪ್ಯೂಟರ್ ನ ಪಾಸ್ ವರ್ಡ್ ಅನ್ನೇ ಕೊಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಅಧಿಕಾರಿಗಳ ತನಿಖೆಯ ವೇಳೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿವೃತ್ತ ಅಧಿಕಾರಿ ಗೋಕುಲ್ ನಾಥ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಯಾವುದೇ ಬ್ಯಾಂಕ್, ವಿದೇಶದಲ್ಲಿನ ಇತರೆ ಬ್ಯಾಂಕ್ ಗಳ ಶಾಖೆಗೆ ಹಣ ವರ್ಗಾವಣೆ ಮಾಡಲು ಸ್ವಿಫ್ಟ್ ಎಂಬ ತಂತ್ರಜ್ಞಾನ ಬಳಸುತ್ತದೆ. ಬ್ಯಾಂಕ್ ನಲ್ಲಿ ಹಣ ವರ್ಗಾವಣೆ ಹೊತ್ತ ಕಾರಣ ಗೋಕುಲ್ ನಾಥ್ ಶೆಟ್ಟಿಗೆ ಈ ಪಾಸ್ ವರ್ಡ್ ಗೊತ್ತಿತ್ತು. ಅವರು ಈ ಪಾಸ್ ವರ್ಡ್ ಅನ್ನು ನೀರವ್ ಮೋದಿ ಕಂಪನಿಯ ಉದ್ಯೋಗಿಗಳಾದ ಹೇಮಂತ್ ಭಟ್ ಮತ್ತು ಇತರರೊಂದಿಗೆ ಹಂಚಿಕೊಂಡಿದ್ದರು ಎಂದು ವರದಿಯಾಗಿದೆ.
ಪಿಎನ್ ಬಿ ಶಾಖೆಯ ಗೋಕುಲ್ ನಾಥ್ ಶೆಟ್ಟಿ ಮತ್ತು ಇತರೆ ಕೆಲ ಸಿಬ್ಬಂದಿ ವೇರಿಫೈಯರ್ ಅಥವಾ ಆಥರೈಸರ್ ಹೆಸರಲ್ಲಿ ನೀರವ್ ಕಂಪನಿಯ ಕೆಲ ಅಧಿಕಾರಿಗಳಿಗೆ ಬ್ಯಾಂಕ್ ನ ಕಂಪ್ಯೂಟರ್ ಪಾಸ್ ವರ್ಡ್ ನೀಡಿದ್ದರು. ಅವರು ಈ ಪಾಸ್ ವರ್ಡ್ ಗಳನ್ನು ಬಳಸಿ ಅಕ್ರಮವಾಗಿ ಎಲ್ ಒಯು ಗಳನ್ನು ಸೃಷ್ಟಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪ್ರತೀ ಎಲ್ ಒಯು ಗಳಿಗೆ ಇಂತಿಷ್ಟು ಹಣ ಎಂದು ಬ್ಯಾಂಕ್ ನ ಅಧಿಕಾರಿಗಳಿಗೆ ಕಮಿಷನ್ ನೀಡಲಾಗುತ್ತಿತ್ತು ಎದು ಸಿಬಿಐ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos