ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅಮ್ಮ ದ್ವಿಚಕ್ರ ವಾಹನ ಯೋಜನೆಗೆ ಚಾಲನೆ ನೀಡಿದ್ದಾರೆ.
ಉದ್ಯೋಗದಲ್ಲಿರುವ ಮಹಿಳೆಯರಿಗೆ ದ್ವಿಚಕ್ರ ವಾಹನ ಖರೀದಿ ಮಾಡಲು 50 ಪ್ರತಿಶತ ಸಬ್ಸಿಡಿಯನ್ನು ಒದಗಿಸುವ ಯೋಜನೆ ಇದಾಗಿದೆ. ಇದು ಜಯಲಲಿತಾ ಅವರ ಮೆಚ್ಚಿನ ಯೋಜನೆಯಾಗಿತ್ತು.
ಈ ಸಮಯದಲ್ಲಿ ಮಾತನಾಡಿದ ತಮಿಳುನಾಡು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ "ನಮ್ಮ ಸರ್ಕಾರವು ಅಮ್ಮ ತತ್ವಗಳಿಂದ ಸ್ಪೂರ್ತಿ ಪಡೆದಿದೆ. ಈ ಅಮ್ಮ ದ್ವಿಚಕ್ರ ವಾಹನ ಯೋಜನೆ ಜಯಲಲಿತಾ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅಮ್ಮ ಅವರೊಡನೆ ನಿಕಟ ಸಂಬಂಧ ಹೊಂದಿದ್ದರು" ಎಂದಿದ್ದಾರೆ.
"ಅಮ್ಮ ತಮಿಳುನಾಡನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ್ದರು. ಶಿಕ್ಷಣ ಹಾಗೂ ಬಡವರಿಗೆ ಸಹಾಯ ಮಾಡುವ ಮೂಲಕ ಅಮ್ಮ ಈ ಸಾಧನೆ ಮಾಡಿದ್ದರು. ಅವರ ಎಲ್ಲಾ ಯೋಜನೆಗಳು ಜನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ದೃಷ್ಟಿಯನ್ನು ಹೊಂದಿತ್ತು. ಇದರಲ್ಲಿಯೂ ನೀರಾವರಿ ಯೋಜನೆ ವ್ಯಾಪಕ ಜನಪ್ರಿಯತೆ ಗಳಿಸಿತ್ತು" ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಚೆನ್ನೈನ ಕಲೈವನರ್ ಅರಂಗಮ್ ಸಭಾಂಗಣದ ಮುಂಭಾಗದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಯಲಲಿತಾ ಅವರ ಎಪ್ಪತ್ತನೇ ಜನ್ಮದಿನದ ಪ್ರಯುಕ್ತ ತಮಿಳುನಾಡಿನಾದ್ಯಂತ ಎಪ್ಪತ್ತು ಲಕ್ಷ ಸಸಿ ನೆಡುವ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ,.
ಚೆನ್ನೈಗೆ ಆಗಮಿಸಿದ್ದ ಪ್ರಧಾನಿ ಮೋದಿಯನ್ನು ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಇ.ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಭಾನುವಾರದಂದು ಪುದುಚೇರಿಗೆ ಭೇಟಿ ನೀಡಲಿರುವ ಪ್ರಧಾನಿ ಅಲ್ಲಿ ಅರವಿಂದರ ಆಶ್ರಮಕ್ಕೆ ತೆರಳಿ ಅವರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ತ್ತು ಶ್ರೀ ಅರಬಿಂದೊ ಇಂಟರ್ನ್ಯಾಷನಲ್ ಸೆಂಟರ್ ಆಫ್ ಎಜುಕೇಷನ್ ಸಂಸ್ಥೆಯ ವಿದ್ಯಾರ್ಥಿಗಳೊಡನೆ ಸಂವಹನ ಕಾರ್ಯಕ್ರಮವಿದೆ. ಅರೋವಿಲ್ ನ ಸುವರ್ಣ ಮಹೋತ್ಸವ ಆಚರಣೆ ಸಂದರ್ಭ ವಿಶೇಷ ಅಂಚೆಚೀಟಿಯನ್ನು ಬಿಡುಗಡೆಗೊಳಿಸುವ ಸಲುವಾಗಿ ಪ್ರಧಾನಿ ಅರೋವಿಲ್ ಗೆ ಭೇಟಿ ಕೊಡಲಿದ್ದಾರೆ.ಈ ಎಲ್ಲಾ ಕಾರ್ಯಕ್ರಮ ಬಳಿಕ ಪುದುಚೇರಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.