ನವದೆಹಲಿ: ಡೋಕ್ಲಾಂ ಸಮಸ್ಯೆ ಬಗೆಹರಿದ ಎಂಟು ತಿಂಗಳ ಬಳಿಕವೂ ಭಾರತ ಚೀನಾ ಗಡಿಯುದ್ದಕ್ಕೂ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ ಎಂದು ರಕ್ಷಣಾ ಇಲಾಖೆ ರಾಜ್ಯ ಸಚಿವ ಸುಭಾಷ್ ಭಮ್ರೆ ಹೇಳಿದ್ದಾರೆ.
"ಗಡಿ ನಿಯಂತ್ರಣಾ ರೇಖೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು ಗಡಿ ಉಲ್ಲಂಘನೆ, ಬಿಕ್ಕಟ್ಟಿನ ಸನ್ನಿವೇಶಗಳು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ" ಅವರು ಹೇಳಿದ್ದಾರೆ.
ಎರಡು ದೇಶಗಳ ನಡುವೆ ಸುಮಾರು ನಾಲ್ಕು ಸಾವಿರ ಕಿಮೀ ಉದ್ದಕ್ಕೆ ಗಡಿರೇಖೆ ಇದ್ದು ಇದನ್ನು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಎನ್ನಲಾಗುತ್ತದೆ.
ರಾಷ್ಟ್ರ ನಿರ್ಮಾಣಕ್ಕೆ ಸೈನ್ಯದ ಕೊಡುಗೆ ವಿಚಾರದಲ್ಲಿ ನಡೆದಿದ್ದ ಸೆಮಿನಾರ್ ನಲ್ಲಿ ಭಾಗವಹಿಸಿ ಮಾತನಾಡಿದ ಭಮ್ರೆ ಎರಡು ರಾಷ್ಟ್ರಗಳ ನಡುವೆ ವಿಶ್ವಾಸ ವೃದ್ಧಿಯ ಉಪಕ್ರಮಗಳು ನಡೆಯುತ್ತಿದೆ. ಆದರೆ ಎಲ್ ಎಸಿ ನಲ್ಲಿ ಭದ್ರತಾ ವ್ಯವಸ್ಥೆಯತ್ತ ನಾವು ಬಲವಾದ ಕಣ್ಗಾವಲು ಇಟ್ಟಿದ್ದೇವೆ ಎಂದಿದ್ದಾರೆ.
ಚೀನಾವು ಉತ್ತರ ಡೋಕ್ಲಾಂ ನಲ್ಲಿ ಭಾರೀ ಪ್ರಮಾಣದ ಸೈನ್ಯವನ್ನು ಜಮಾವಣೆ ಮಾಡುತ್ತಿದೆ ಅಲ್ಲದೆ ಅಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಮೂಲಗಳು ಖಚಿತ ಪಡಿಸಿದೆ. ಕಳೆದ ವರ್ಷ ಚೀನಾವು ವಿವಾದಿತ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ತೊಡಗಿದ ಕಾರಣ ಡೋಕ್ಲಾಂ ಭಾಗದಲ್ಲಿ ಗಡಿ ಸಮಸ್ಯೆ ಉಲ್ಬಣಗೊಂಡಿತ್ತು. ಭಾರತ ಹಾಗೂ ಚೀನಾ ಗಡಿಯಲ್ಲಿ ಒಟ್ಟು 73 ದಿನಗಳ ಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.