ಬೆಂಗಳೂರು: ಖ್ಯಾತ ಅಣು ವಿಜ್ಞಾನಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ನಿಯಾಸ್) ನಿರ್ದೇಶಕ ಆಗಿದ್ದ ಬಲದೇವ್ ರಾಜ್ ಶನಿವಾರ ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾಗಿದ್ದಾರೆ.
70 ವರ್ಷದ ಬಲದೇವ್ ರಾಜ್ ಸಮ್ಮೇಳನವೊಂದರಲ್ಲಿ ಭಾಗವಹಿಸುವುದಕ್ಕಾಗಿ ಪುಣೆಗೆ ತೆರಳಿದ್ದರು. ಬಲದೇವ್ ಅವರ ನಿಧನಕ್ಕೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ.
ಕಲ್ಪಾಕಂನ ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ, ಇಂಧನ, ಸಾಂಸ್ಕೃತಿಕ ಪರಂಪರೆ, ವೈದ್ಯಕೀಯ ತಂತ್ರಜ್ಞಾನ, ನ್ಯಾನೊವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದರು. ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದ ಇವರು ಕಳೆದ 2014ರಲ್ಲಿ ನಿಯಾಸ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಅನೇಕ ಪ್ರಸಿದ್ದ ಪತ್ರಿಕೆ, ನಿಯತಕಾಲಿಕಗಳಲ್ಲಿ 1000ಕ್ಕೂ ಹೆಚ್ಚು ಶೈಕ್ಷಣಿಕ ಪ್ರಬಂಧ, ಸುಮಾರು 70 ಕೃತಿಗಾಳನ್ನು ರಚಿಸಿದ್ದ ಬಲದೇವ್ ರಾಜ್ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು. ಇದರೊಡನೆ ಭಾರತೀಯ ಪರಮಾಣು ಸೊಸೈಟಿಯ ಜೀವಮಾನ ಸಾಧನೆ ಪ್ರಶಸ್ತಿ, ಹೋಮಿ ಭಾಭಾ ಚಿನ್ನದ ಪದಕ ಮತ್ತು ನಾಯುದಮ್ಮ ಸ್ಮಾರಕ ಪ್ರಶಸ್ತಿ ಇನ್ನೂ ಅನೇಕ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದರು.
"ಪ್ರೊಫೆಸರ್ ರಾಜ್ ನೂರಾರು ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಮಾರ್ಗದರ್ಶನ ನೀಡಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಉನ್ನತ ಮಟ್ಟದ ವೃತ್ತಿಪರತೆಯನ್ನು ಮುಂದುವರಿಸಲು ಸಹಕಾರ ನೀಡುವ ಮೂಲಕ ಅನುಕರಣೆಯ ಆದರ್ಶ ವ್ಯಕ್ತಿಯಾಗಿದ್ದರು. ಅವರ ಮಾರ್ಗದರ್ಶನ, ಆಡಳಿತದಡಿಯಲ್ಲಿ ನಿಯಾಸ್ ಹೊಸ ಎತ್ತರಕ್ಕೆ ಏರಿದೆ." ಎಂದು ನಿಯಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos