ನವದೆಹಲಿ: ಭಾರತದ ವಿಶಿಷ್ಠ ಗುರುತಿನ ಚೀಟಿ ಆಧಾರ್ ವಿರುದ್ಧ ದುರುದ್ದೇಶಪೂರಿತ ಪ್ರಚಾರ ಅಭಿಯಾನ ನಡೆಯುತ್ತಿದೆ ಎಂದು ಯುಐಎಡಿಐ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.
ಆಧಾರ್ ಮಾಹಿತಿ ಸೋರಿಕೆ ಸಂಬಂಧ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಯುಐಎಡಿಐ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರು, ಆಧಾರ್ ದುರ್ಬಳಕೆಗಾಗಿ ದುರುದ್ದೇಶ ಪೂರಿತ ಪ್ರಚಾರ ಅಭಿಯಾನ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆಧಾರ್ ಮಾಹಿತಿ ಸೋರಿಕೆ ಕುರಿತು ವರದಿ ಮಾಡಿದ್ದ ವರದಿಗಾರ್ತಿ ವಿರುದ್ಧ ಎಫ್ ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ನಿಲೇಕಣಿ ಅವರು, ಆಧಾರ್ ಮಾಹಿತಿ ಸೋರಿಕೆ ಪ್ರಕರಣವನ್ನು ಕೂಲಂಕುಷವಾಗಿ ಅವಲೋಕಿಸಿದರೆ, ಇದು ಖಂಡಿತಾ ಶೇ.100ಕ್ಕೆ ನೂರರಷ್ಟು ದುರುದ್ದೇಶ ಪೂರಿತ ಪ್ರಚಾರ ಅಭಿಯಾನವಾಗಿದೆ ಎಂದೆನಿಸುತ್ತದೆ ಎಂದು ಹೇಳಿದ್ದಾರೆ.
ಆಧಾರ್ ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಹೊಂದಿದ್ದು, ಅಷ್ಟು ಸುಲಭವಾಗಿ ಮಾಹಿತಿ ಕದಿಯಲು ಸಾಧ್ಯವೇ ಇಲ್ಲ. ಯಾವುದೇ ವಿಚಾರದ ಬಗ್ಗೆ ನಕಾರಾತ್ಮಕವಾಗಿ ಯೋಚಿಸುತ್ತಿದ್ದರೆ ನಡೆಯುವ ಪ್ರತೀ ಘಟನೆಗಳೂ ನಕಾರಾತ್ಮಕ ಘಟನೆಗಳೇ ಎಂದೆನಿಸುತ್ತದೆ. ಹೀಗಾಗಿ ಆಧಾರ್ ಅನ್ನು ಜನರು ರಚನಾತ್ಮಕ ದೃಷ್ಟಿಕೋನದಿಂದ ನೋಡಬೇಕು ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.
ಈ ಹಿಂದಷ್ಟೇ ದಿ ಟ್ರಿಬ್ಯೂನ್ ಪತ್ರಿಕೆಯ ವರದಿಗಾರ್ತಿ ರಚನಾ ಖೈರಾ ಅವರು ಕೇವಲ 500ರು.ಗಳಿಗೆ ಆಧಾರ್ ಮಾಹಿತಿ ಸೋರಿಕೆಯಾಗುತ್ತಿದ್ದು, ಈಗಾಗಲೇ ಸುಮಾರು 1 ಬಿಲಿಯನ್ ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂದು ವರದಿ ಮಾಡಿದ್ದರು. ಈ ವರದಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಯುಐಎಡಿಐ ಸಂಸ್ಥೆ ವರದಿಗಾರ್ತಿ ವಿರುದ್ಧ ಎಫ್ ಐಆರ್ ದಾಖಲಿಸಿತ್ತು, ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಕೂಡ ಕೆಲ ಆಧಾರ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos