ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ, ಸರ್ಕಾರಿಶಾಲೆ, ಮದರಸಾಗಳ ಮೂಲಕ ಯುವಕರಲ್ಲಿ ಮೂಲಭೂತವಾದ ಪ್ರಸರಣ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರ ಮದರಸಾಗಳ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಶುಕ್ರವಾರ ಸೇನಾ ದಿನಾಚರಣೆ ನಿಮಿತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯೇ ಆಗಬೇಕು ಎಂದು ಹೇಳಿದರು. ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಯಿಂದ ಮಾತ್ರ ಕಾಶ್ಮೀರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಾಧ್ಯ. ಕಾಶ್ಮೀರದಲ್ಲಿರುವ ಮೂಲಭೂತವಾದವನ್ನು ಬುಡಸಹಿತ ಕಿತ್ತೊಗೆಯಬೇಕಾದರೆ ಮೊದಲು ಅಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ, ಸರ್ಕಾರಿ ಶಾಲೆ, ಮದರಸಾ ಮತ್ತು ಮಸೀದಿಗಳ ದುರ್ಬಳಕೆಯಾಗುತ್ತಿದ್ದು, ಶಿಕ್ಷಣದ ಬದಲಿಗೆ ಮೂಲಭೂತವಾದವನ್ನು ವಿದ್ಯಾರ್ಥಿಗಳಿಗೆ ತುಂಬಲಾಗುತ್ತಿದೆ. ಹೀಗಾಗಿ ಮದರಸಾ ಮತ್ತು ಮಸೀದಿಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸಲೇಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗಳಲ್ಲಿಯೇ ಕಾಶ್ಮೀರ ರಾಜ್ಯವನ್ನು ಭಾರತದಿಂದ ಬೇರ್ಪಡಿಸಿ ಪಾಠ ಮಾಡಲಾಗುತ್ತಿದೆ. ನೀವು ಯಾವುದೇ ಸರ್ಕಾರಿ ಶಾಲೆಗಳಿಗೆ ತೆರಳಿ ಪರಿಶೀಲಿಸಿ, ಅಲ್ಲಿ ಎರಡೆರಡು ಮ್ಯಾಪ್ ಗಳು ದೊರೆಯುತ್ತವೆ..ಒಂದು ಪ್ರತ್ಯೇಕ ಜಮ್ಮು ಮತ್ತು ಕಾಶ್ಮೀರದ್ದು..ಮತ್ತೊಂದು ಭಾರತ ದೇಶದ್ದು..ಈ ಮೂಲಕ ಮಕ್ಕಳಿಗೆ ಆ ಶಾಲೆಗಳು ಏನನ್ನು ಸಾರಲು ಮುಂದಾಗುತ್ತಿವೆ..? ಸರ್ಕಾರಿ ಶಾಲೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳಲ್ಲಿಯೇ ಪ್ರತ್ಯೇಕತಾವಾದನ್ನು ತುಂಬಲಾಗುತ್ತಿದೆ. ಮುಖ್ಯವಾಗಿ ನಮಗೆ ಹಿನ್ನಡೆಯಾಗುತ್ತಿರುವುದು ಸಾಮಾಜಿಕ ಜಾಲತಾಣಗಳಿಂದ. ಸುಳ್ಳು ಮಾಹಿತಿಗಳು ಮತ್ತು ಪ್ರಚೋದನಕಾರಿ ಮಾಹಿತಿಗಳು ಕ್ಷಣ ಮಾತ್ರದಲ್ಲಿ ಕಾಶ್ಮೀರದ ಲಕ್ಷಾಂತರ ಯುವಕರನ್ನು ತಲುಪುತ್ತಿದೆ. ಅಂತೆಯೇ ಮದರಸಾಗಳು ಮತ್ತು ಮಸೀದಿಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕಲಿಸಲಾಗುತ್ತಿರುವ ಪಾಠಗಳು ಕೂಡ ಮೂಲಭೂತವಾದದತ್ತ ಮಕ್ಕಳನ್ನು ತಳ್ಳುತ್ತಿದ್ದು, ಇಂತಹ ಮದರಸಾ ಮತ್ತು ಮಸೀದಿಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಲೇಬೇಕು ಎಂದು ಬಿಪಿನ್ ರಾವತ್ ಹೇಳಿದ್ದಾರೆ.
ಅಂತೆಯೇ ಕಣಿವೆ ರಾಜ್ಯದಲ್ಲಿ ಹೆಚ್ಚೆಚ್ಚು ಪ್ರಮಾಣದಲ್ಲಿ ಪಬ್ಲಿಕ್ ಶಾಲೆಗಳು ಮತ್ತು ಹೆಚ್ಚೆಚ್ಚು ಸಿಬಿಎಸ್ ಇ ಪಠ್ಯಗಳಿರುವ ಶಾಲೆಗಳನ್ನು ತೆರೆಯಬೇಕು ಎಂದು ರಾವತ್ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos