ನವದೆಹಲಿ: ಮಣಿಪುರದಲ್ಲಿ ಸೇನೆ ನಡೆಸಿದೆ ಎನ್ನಲಾದ ನಕಲಿ ಎನ್ ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ನ ವಿಶೇಷ ತನಿಖಾ ತಂಡದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕಳೆದ ವಿಚಾರಣೆ ವೇಳೆಯಲ್ಲಿ ಸೂಚನೆ ನೀಡಿದಷ್ಟು ಸಂಖ್ಯೆಯಲ್ಲಿ ಎಫ್ಐಆರ್ ಗಳನ್ನು ದಾಖಲಿಸದೇ ಇದ್ದ ಹಿನ್ನೆಲೆಯಲ್ಲಿ ಕೋರ್ಟ್ ಎಸ್ಐಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ವಿಚಾರಣೆ ವೇಳೆ ಜ.31 ರ ಒಳಗಾಗಿ 30 ಎಫ್ಐಆರ್ ಗಳನ್ನು ದಾಖಲಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಆದರೆ ಎಸ್ಐಟಿ ಈ ವರೆಗೂ ಕೇವಲ 12 ಎಫ್ ಐಆರ್ ಗಳನ್ನು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾ.ಮದನ್ ಬಿ.ಲೋಕುರ್ ಹಾಗೂ ಯುಯು ಲಲಿತ್ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಯನ್ನು ಈ ವರ್ಷದ ಫೆ.28 ಒಳಗೆ ಮುಕ್ತಾಯಗೊಳಿಸಿ ಅಂತಿಮ ವರದಿ ನೀಡಬೇಕೆಂದು ಸೂಚನೆ ನೀಡಿದ್ದಾರೆ.
ಕಳೆದ ವರ್ಷ ಜುಲೈ 14 ರಂದು ಕೋರ್ಟ್ 30 ಎಫ್ಐಆರ್ ಗಳನ್ನು ದಾಖಲಿಸುವಂತೆ ಸೂಚಿಸಿತ್ತು. ಅಂದಿನಿಂದ ಇಂದಿನವರೆಗಿನ ಸ್ಥಿತಿ-ಗತಿ ವರದಿಗಳನ್ನೂ ಸಲ್ಲಿಕೆ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ.