ದೇಶ

ಉತ್ತರ ಪ್ರದೇಶ: ತಂದೆಯ ಗನ್ ನಿಂದ ಶೂಟ್ ಮಾಡಿಕೊಂಡು ಸಾವಿಗೆ ಶರಣಾದ ಬಾಲಕ

Lingaraj Badiger
ಕಾನ್ಪುರ್: 13 ವರ್ಷದ ಬಾಲಕನೊಬ್ಬ ಮನೆಯಲ್ಲಿ ತನ್ನ ತಂದೆಯ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದ ಅಶೋಕ್ ನಗರದಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನಿನ್ನೆ ನಡೆದಿದ್ದು, ಬಾಲಕ ಗೌರವ್ ಶುಕ್ಲಾ ತನ್ನ ತಾಯಿ ಮತ್ತು ಕಿರಿಯ ಸಹೋದರ ಮನೆಕೆಲಸ ಮಾಡುತ್ತಿದ್ದ ವೇಳೆ ಕೊಠಡಿಗೆ ತೆರಳಿ ಗನ್ ನಿಂದ ಶೂಟ್ ಮಾಡಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿ ಕೂಡಲೇ ಬಾಲಕನ ತಾಯಿ ಮತ್ತು ಸಹೋದರ ಕೊಠಡಿಗೆ ಓಡಿ ಬಂದಿದ್ದಾರೆ. ಈ ವೇಳೆ ಗೌರವ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಪಕ್ಕದಲ್ಲೇ ತಂದೆಯ ಪರವಾನಗಿ ಪಡೆದ ಗನ್ ಸಹ ಬಿದ್ದಿತ್ತು ಎಂದು ಪೊಲೀಸ್ ಅಧಿಕಾರಿ ಸೂರ್ಯಪಾಲ್ ಸಿಂಗ್ ಅವರು ಹೇಳಿದ್ದಾರೆ.
ಬಾಲಕ ಬಳಸಿದ ಗನ್ ಅನ್ನು ಮತ್ತು ಘಟನೆ ನಡೆದ ಸ್ಥಳದಲ್ಲಿ ಕಾಲಿ ಶೆಲ್ ವೊಂದನ್ನು ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅಖಿಲೇಶ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.
ಬಾಲಕ ಕೋಚಿಂಗ್ ಕ್ಲಾಸ್ ಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಆತನ ತಾಯಿ ಬೈದಿದ್ದರು. ಇದರಿಂದ ನೊಂದ ಬಾಲಕ ಈ ಕಠಿಣ ಕ್ರಮ ತೆಗೆದುಕೊಂಡಿದ್ದಾನೆ ಎಂದು ಮೀನಾ ಅವರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
SCROLL FOR NEXT