ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕ್ ಸೈನಿಕರ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ, ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಹಾಗೂ ಅಖ್ನೂರ್ ಸೆಕ್ಟರ್ ಗಳ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ಮಳೆಗರೆಯುತ್ತಿದೆ. ಇತ್ತ ಕೃಷ್ಣ ಘಾಟಿಯಲ್ಲಿ ಪಾಕಿಸ್ತಾನ ಸೇನೆಯ ಗುಂಡಿಗೆ ಭಾರತೀಯ ಯೋಧ ಮಂದೀಪ್ ಸಿಂಗ್ ಹುತಾತ್ಮರಾಗಿದ್ದು, ನಿನ್ನೆ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯಿಂದ ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, 11 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
ಸುದ್ದಿಸಂಸ್ಥೆಯ ಪ್ರಕಾರ 23 ವರ್ಷದ ಸೆಪೋಯ್ ಮನ್ ದೀಪ್ ಸಿಂಗ್ ಅವರು ಪಾಕಿಸ್ತಾನಿ ರೇಂಜರ್ಸ್ ಗಳ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಪ್ರಮುಖವಾಗಿ ಪಾಕಿಸ್ತಾನಿ ರೇಂಜರ್ಸ್ ಗಳು ಭಾರತೀಯ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಸತತ ಗುಂಡಿನ ದಾಳಿ ನಡೆಸುತ್ತಿದ್ದು, ಚಿನಾಬ್ ನದಿ ದಡದಲ್ಲಿರುವ ಗ್ರಾಮ ಮತ್ತು ಐಬಿ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಸುತ್ತಮುತ್ತಲಿನ ಹಲವು ಗ್ರಾಮಗಳು ಗುಂಡಿನ ದಾಳಿಗೆ ತುತ್ತಾಗಿದ್ದು, ಈ ವರೆಗೂ ಭಾರತೀಯ ಸೇನೆ ಸುಮಾರು 8 ಸಾವಿರದಿಂದ 9 ಸಾವಿರ ಗ್ರಾಮಸ್ಥರನ್ನು ಸ್ಥಳಾಂತರ ಮಾಡಿದೆ ಎಂದು ತಿಳಿದುಬಂದಿದೆ. ಈ ಪೈಕಿ ಆರ್ ಎಸ್ ಪುರ ಸೆಕ್ಟರ್ ನಲ್ಲಿರುವ ಸೇನಾ ಕ್ಯಾಂಪ್ ನಲ್ಲಿ ಸುಮಾರು 1 ಸಾವಿರ ಮಂದಿಗೆ ಆಶ್ರಯ ಕಲ್ಪಿಸಲಾಗಿದ್ದು, ಉಳಿದವರಿಗೆ ಇತರೆ ಪ್ರದೇಶಗಳಲ್ಲಿ ಕ್ಯಾಂಪ್ ನಿರ್ಮಿಸಲಾಗಿದೆ.
ಗಡಿಯಲ್ಲಿನ ಪ್ರಕ್ಷುಬ್ಧ ವಾತಾವರಣದಿಂದಾಗಿ ಈಗಾಗಲೇ ಸ್ಥಳೀಯ ಜಿಲ್ಲಾಡಳಿತ ಎಲ್ಲ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಂತೆಯೇ ಗಡಿ ಗ್ರಾಮಸ್ಥರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆಯೂ ಸೂಚನೆ ನೀಡಲಾಗಿದೆ.
ಒಟ್ಟಾರೆ ಪಾಕಿಸ್ತಾನದ ದುರ್ವರ್ತನೆಯಿಂದಾಗಿ ಗಡಿ ಗ್ರಾಮದಲ್ಲಿ ಅಶಾಂತಿ ಮತ್ತು ಭಯದ ವಾತಾವರಣ ನೆಲೆಸುವಂತಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos