ಕುಟುಂಬ ಸದಸ್ಯರನ್ನು ಕಳೆದುಕೊಂಡು ರೋಧಿಸುತ್ತಿರುವ ಕುಟುಂಬಸ್ಥರು
ನವದೆಹಲಿ: ರಾಜಧಾನಿ ದೆಹಲಿ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡತೊಡಗಿದ್ದು, ಈ ನಡುವಲ್ಲೇ ಪೊಲೀಸರು ಪ್ರಕರಣ ಆತ್ಮಹತ್ಯೆ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸುತ್ತಿದ್ದಾರೆ.
11 ಮಂದಿ ಸಾವನ್ನಪ್ಪಿದ್ದ ಮನೆಯಲ್ಲಿ ಪೊಲೀಸರಿಗೆ ಹಸ್ತಾಕ್ಷರಗಳಲ್ಲಿ ಬರೆದಿರುವ ಹಾಳೆಯೊಂದು ದೊರಕಿದ್ದು, ಇದರಲ್ಲಿರುವ ಅಂಶಗಳನ್ನು ಗಮನಿಸಿದರೆ, ಮೋಕ್ಷ ಸಂಪಾದನೆಗಾಗಿ ಧಾರ್ಮಿಕ ಆಚರಣೆ ಕೈಗೊಂಡು ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
11 ಮಂದಿಯ ಪೈಕಿ ಮೃತಪಟ್ಟಿರುವ ಲಲಿತ್ ಭಾಟಿಯಾ ಎಂಬುವವರು ಇತರರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರಣೆ ನೀಡಿರಬಹುದು ಎಂದು ಪೊಲೀಸರು ಮೂಲಗಳು ಹೇಳುತ್ತಿವೆ.
ಲಲಿತ್ ಅವರ ತಂದೆ 10 ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಇದಾದ ಬಳಿಕ ಲಲಿತ್ ಅವರು ಮಾನಸಿಕ ಅಸ್ವಸ್ಥರಾಗಿದ್ದರು. ಹಲವು ಭ್ರಮೆಗಳಲ್ಲಿದ್ದ ಲಲಿತ್ ಅವರು ಸಾಮೂಹಿಕ ಆತ್ಮಹತ್ಯೆಗೆ ಪ್ರೇರಣೆ ನೀಡಿರಬಹುದು ಎಂದು ಹೇಳಲಾಗುತ್ತಿದೆ.
ಮನೆಯಲ್ಲಿ ಸಿಕ್ಕಿರುವ ಕಾಗದಗಳಲ್ಲಿ ಕೆಲ ಬೆಚ್ಚಿ ಬೀಳಿಸುವ ವಿವರಗಳು ಪೊಲೀಸರಿಗೆ ಲಭ್ಯವಾಗಿದ್ದು, ಕಾಗದದಲ್ಲಿರುವ ಮಾಹಿತಿಗಳು ಪೊಲೀಸರಲ್ಲಿ ಹಲವು ಅನುಮಾನಗಳನ್ನು ಮೂಡಿಸತೊಡಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಾಂತ್ರಿಕರ ಸಂಪರ್ಕವೇನಾದರೂ ಹೊಂದಿದ್ದರೇ ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.
ಗುರುವಾರ ಅಥವಾ ಭಾನುವಾರವನ್ನು ಆಯ್ಕೆ ಮಾಡಿಕೊಳ್ಳಿ. ವಸ್ತ್ರವನ್ನು ಸರಿಯಾಗಿ ಬಿಗಿಯಿರಿ. ಅದು ಹೇಗೆಂದರೆ, ಶೂನ್ಯ ಕಾಣುವಂತೆ ಇರಬೇಕು. ಹಗ್ಗದ ಜೊತೆ ಸೀರೆ ಅಥವಾ ದುಪ್ಪಟ್ಟಾವನ್ನು ಬಳಸಿ, ಸಾವಿಗೂ ಮುನ್ನ 7 ದಿನಗಳ ಕಾಲ ಧಾರ್ಮಿಕ ಆಚರಣೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಈ ಅವಧಿಯಲ್ಲಿ ಸ್ಪೂರ್ತಿ ಪಡೆದೆರ ಅದೇ ದಿನ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ.
ಒಂದು ವೇಳೆ ಹಿರಿಯ ಮಹಿಳೆಗೆ ನಿಲ್ಲಲು ಸಾಧ್ಯವಾಗದೇ ಹೋದರೆ, ನೀವು ಆಕೆಯನ್ನು ಪಕ್ಕದ ಕೋಣೆಯಲ್ಲಿ ಮಲಗಿಸಬಹುದು. ಮಂದ ಬೆಳಕನ್ನು ಬಳಸಿಕೊಳ್ಳ. ಕೈಗಳನ್ನು ಕಟ್ಟಿಕೊಳ್ಳಿ. ಒಂದು ವೇಳೆ ವಸ್ತ್ರದ ಚೂರು ಇದ್ದರೆ ಅದರಿಂದ ಕಣ್ಣುಗಳನ್ನು ಕಟ್ಟಿಕೊಳ್ಳಿ. ಬಾಯನ್ನು ಮುಚ್ಚಿಕೊಳ್ಳಲು ಬಳಸುವ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳಿ. ನೀವು ಹೆಚ್ಚು ಸಮರ್ಪಣೆಯನ್ನು ತೋರಿಸಿದಷ್ಟೂ ಫಲಿತಾಂಶ ಉತ್ತಮವಾಗಿರಲಿದೆ.
ಇದು ಮಧ್ಯರಾತ್ರಿ 12ರಿಂದ 1 ಗಂಟೆಯ ಅವಧಿಯಲ್ಲಿಯೇ ಮಾಡಬೇಕು. ಅದಕ್ಕೂ ಮುನ್ನ ಹವನ ಪೂಜೆಯನ್ನು ಮಾಡಬೇಕು. ಎಲ್ಲರೂ ಒಂದೇ ರೀತಿಯ ವಿಚಾರ ಹೊಂದಿರಬೇಕು. ನೀವು ಹೀಗೆ ಮಾಡಿದರೆ ನಿಮಗೆ ಫಲ ದೊರೆಯುತ್ತದೆ. ಇವಿಷ್ಟೂ ಸಂಗತಿಗಳು ಹಸ್ತಪ್ರತಿಯಲ್ಲಿ ಬರೆಯಲಾಗಿದೆ.
ಈ ನಡುವೆ ಸಾವಿನ ಸಂದರ್ಭಕ್ಕೂ ಪತ್ರಕ್ಕೂ ತಾಳೆಯಾಗುತ್ತಿದ್ದು, ಸಾವು ಹೇಗೆ ಸಂಭವಿಸಿತು ಎಂಬುದರ ಸುಳಿಸುವ ಇದೀಗ ಪೊಲೀಸರಿಗೆ ದೊರಕಿದೆ.
ಒಂದೆಡೆ ಪೊಲೀಸರು ಪ್ರಕರಣವನ್ನು ಆತ್ಮಹತ್ಯೆ ಎಂದು ಹೇಳುತ್ತಿದ್ದರೆ, ಕುಟುಂಬ ಸದಸ್ಯರು ಕೊಲೆಯೆಂದು ಹೇಳುತ್ತಿದ್ದಾರೆ.
ಕುಟುಂಬಸ್ಥರ ಸಾವು ಆತ್ಮಹತ್ಯೆಯಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ. ಮಾಧ್ಯಮಗಳ ವರದಿಯನ್ನು ನಾನು ನಂಬುವುದಿಲ್ಲ. ಕುಟುಂಬಸ್ಥರು ಎಂದಿಗೂ ಯಾವುದೇ ಬಾಬಾಗಳನ್ನು ಭೇಟಿ ಮಾಡಿಲ್ಲ ಎಂದು ದಿನೇಶ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos