ನವದೆಹಲಿ; ದೆಹಲಿ ಬುರಾರಿ ನಿಗೂಢ ಸಾವು ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಭಾಟಿಯಾ ಕುಟುಂಬದ ಸಾವು ಕುರಿತಂತೆ ಹಲವು ವಿಷಯಗಳು ಬಹಿರಂಗಗೊಳ್ಳುತ್ತಿವೆ.
ಸಾವಿಗೆ ಶರಣಾದ ಕುಟುಂಬ ಸದಸ್ಯರೂ ಸಾವಿಗೂ ಮುನ್ನ ನೇಣು ಬಿಗಿದುಕೊಳ್ಳುವ ಸಲುವಾಗಿ ಕುರ್ಚಿಗಳು ಹಾಗೂ ವೈರ್ ಗಳನ್ನು ತರುತ್ತಿರುವ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಇದಷ್ಟೇ ಅಲ್ಲದೆ, ಪೊಲೀಸರು 11 ವರ್ಷಗಳಿಂದ ಬರೆದುಕೊಂಡು ಬಂದಿರುವ 11 ಡೈರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಡೈರಿಗಳಲ್ಲಿರುವ ಅಂಶಗಳು ಆತ್ಮಹತ್ಯೆ ಮಾಡಿಕೊಂಡುವ ರೀತಿಗಳಿಗೆ ಹೋಲಿಕೆಯಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಯುವಾಗ ಮಾಡುವ ಧಾರ್ಮಿಕ ಕ್ರಿಯೆಗಳಿಗೆ ಪೂರಕವಾಗುವಂತೆ ಆ ದಿನ ಮನೆಯಲ್ಲಿ ಅಡುಗೆ ಮಾಡುವ ಹಾಗಿರಲಿಲ್ಲ. ನೇಣಿ ಬಿಗಿದುಕೊಳ್ಳುವ 6 ಗಂಟೆಗಳಿಗೂ ಮುನ್ನ ಎಲ್ಲರೂ ಮೊಬೈಲ್ ಗಳನ್ನು ಸೈಲೆಟ್ ನಲ್ಲಿಡಬೇಕಿತ್ತು. ಧಾರ್ಮಿಕ ಕ್ರಿಯೆಗೆ ಯಾವುದೇ ಅಡಚಣೆ ಆಗದಂತೆ ಆ ವ್ಯಕ್ತಿ ಎಚ್ಚರ ವಹಿಸಬೇಕಿದ್ದು. ಇದರಂತೆ ಎಲ್ಲಾ ರೀತಿಯ ಧಾರ್ಮಿಕ ಕ್ರಿಯೆಗಳನ್ನು ಪೂರ್ಣಗೊಳಿಸಿದ್ದ ಕುಟುಂಬ ಸದಸ್ಯರು ತಾವು ಸಾಯುವುದಿಲ್ಲವೆಂದೇ ನಂಬಿದ್ದರು.
ದೇವರನ್ನು ಸಂತುಷ್ಟಪಡಿಸಿ, ಮೋಕ್ಷ ಹೊಂದಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ಆ ಕುಟುಂಬದವರ ಪ್ರಕಾರ ಈ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಸರಿಯಾಗಿ ಪಾಲಿಸಿದರೆ ಯಾರೂ ಸಾಯುವುದಿಲ್ಲ. ಸಂತುಷ್ಟನಾದ ದೇವರೇ ನಮ್ಮನ್ನು ಕಾಪಾಡುತ್ತಾನೆ. ಪವಾಡವೊಂದು ಘಟಿಸುತ್ತದೆ ಎಂದು ನಂಬಿದ್ದರು.
ಡೈರಿಯಲ್ಲಿರುವ ನಿರ್ದೇಶನದ ಪ್ರಕಾರ ಒಂದು ಬಟ್ಟಲಿನಲ್ಲಿ ನೀರಿಡಬೇಕು. ನೀರಿನ ಬಣ್ಣ ಬದಲಾದರೆ, ಬದುಕುಳಿಯುತ್ತೀರ ಎಂದು ಬರೆಯಲಾಗಿದೆ. ಸಾಯುವುದಿಲ್ಲ ಎಂದು ನಂಬಿದ್ದ ಕುಟುಂಬ ಸದಸ್ಯರು ಭೂಮಿ ನಡಗುತ್ತದೆ, ಆಗಸದಲ್ಲಿ ರಭಸದಿಂದ ಬೀಸುವ ಗಾಳಿ ನಮ್ಮನ್ನು ಬದುಕಿಸುತ್ತದೆ ಎಂದು ನಂಬಿದ್ದರು. ಈ ಕಾರಣಕ್ಕೆ 11 ಮಂದಿ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದರು ಎಂದು ಹೇಳಲಾಗುತ್ತಿದೆ.
ಭಾಟಿಯಾ ಕುಟುಂಬದ ಎದುರು ಮನೆಯಲ್ಲಿರುವ ಸಿಸಿಟಿವಿಯಲ್ಲಿ ಕೆಲ ದೃಶ್ಯಾವಳಿಗಳು ಸೆರೆಯಾಗಿದ್ದು, ಇದರಲ್ಲಿ ಸಾವನ್ನಪ್ಪಿರುವ ಸವಿತಾ ಹಾಗೂ ಅವರ ಮಗಳು ನೀತು 5 ಕುರ್ಚಿಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ರಾತ್ರಿ 10.15ರ ಸುಮಾರಿಗೆ ಧೃವ ಮತ್ತು ಶಿವಂ ಇಬ್ಬರೂ ಅಂಗಡಿಯಿಂದ ವೈಯರ್ ಗಳನ್ನು ತರುತ್ತಿರುವುದು ಕಂಡುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಒಂದೇ ಕುಟುಂಬದ 11 ಜನರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯೊಂದು ಬೆಳಕಿಗೆ ಬಂದಿತ್ತು. 10 ಜನರ ಶವಗಳು ಮನೆಯಲ್ಲಿ ಗಾಳಿ-ಬೆಳಕಿಗಾಗಿ ಬಳಸುವ ಬೆಳಕಿಂಡಿಯ ಕಬ್ಬಿಣದ ಸರಳುಗಳಿಗೆ ನೇತಾಡುತ್ತಿತ್ತು. 77 ವರ್ಷದ ಮಹಿಳೆಯ ಶವ ನೆಲದ ಮೇಲೆ ಬಿದ್ದಿತ್ತು.
ಮೃತರಲ್ಲಿ 7 ಮಂದಿ ಮಹಿಳೆಯರಾಗಿದ್ದರೆ, ಇಬ್ಬರು ಮಕ್ಕಳಿದ್ದರು. ಶವಗಳು ಕಣ್ಣಗೆ ಬಟ್ಟೆ ಕಟ್ಟಿದ, ಬಾಯಿಕೆ ಪಟ್ಟಿ ಹಾಕಿದ ಸ್ಥಿತಿಯಲ್ಲಿದ್ದರೆ, ಮಕ್ಕಳಿಬ್ಬರ ಶವಗಳ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು.
ಮೃತರನ್ನು ಭಾಟಿಯಾ ಕುಟುಂಬದ ನಾರಾಯಣ ದೇವಿ (77), ಈಕೆಯ ಮಗಳು ಪ್ರತಿಭಾ (57), ಇಬ್ಬರು ಪುತ್ರರಾದ ಭಾವನೇಶ್ (50), ಲಲಿತ್ ಭಾಟಿಯಾ (45), ಭಾವನೇಶ್ ಪತ್ನಿ ಸವಿತಾ (48), ಈಕೆಯ 3 ಮಕ್ಕಳಾದ ಮೀನು (23), ನಿಧಿ (25) ಹಾಗೂ ಧ್ರುವ (15), ಲಲಿತ್ ಪತ್ನಿ ಟೀನಾ (42), ಈಕೆಯ 15 ವರ್ಷದ ಮಗ ಶಿವಂ, ಪ್ರತಿಭಾಳ ಪುತ್ರಿ ಪ್ರಿಯಾಂಕಾ (33) ಎಂದು ಗುರ್ತಿಸಲಾಗಿದೆ.