ತಿರುಪತಿ: ತಿರುಮಲ ದೇವಸ್ಥಾನ ಆರು ದಿನ ಬಂದ್ ನಿರ್ಧಾರ ಹಿಂಪಡೆದ ಟಿಟಿಡಿ
ವಿಜಯವಾಡ: ಮಹತ್ವದ ಬೆಳವಣಿಗೆಯಲ್ಲಿ ಟಿಟಿಡಿ ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನವನ್ನು ಆರು ದಿನಗಳ ಕಾಲ ಮುಚ್ಚುವ ತನ್ನ ನಿರ್ಧಾರವನ್ನು ಹಿಂಪಡೆದಿದೆ. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಟಿಟಿಡಿ ಅಧಿಕಾರಿಗಳೊಡನೆ ಮಾತುಕತೆ ನಡೆಸಿದ ಬಳಿಕ ಆಡಳಿತ ಮಂಡಳಿಉಯು ದೇವಸ್ಥಾನವನ್ನು ಮುಚ್ಚುವ ಬದಲು ಅಂದು ಸೀಮಿತ ಸಂಖ್ಯೆಯ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಿದೆ.
ಎರಡು ದಿನಗಳ ಹಿಂದೆ ಸಭೆ ಸೇರಿದ್ದ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯು ದೇವಾಲಯ ಶುದ್ದೀಕರಣ ಕಾರಣ ಆಗಸ್ಟ್ 9 ರಿಂದ ಆಗಸ್ಟ್ 17ರವರೆಗೆ ಭಕ್ತಾದಿಗಳಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿಲ್ಲ ಎಂದು ಪ್ರಕಟಣೆ ಹೊರಡಿಸಿತ್ತು.
ದೇವಸ್ಥಾನದ ಆವರಣವನ್ನು ಶುದ್ದೀಕರಿಸುವ ಧಾರ್ಮಿಕ ಆಚರಣೆ ಮಹಾ ಸಂಪ್ರೋಕ್ಷಣ ವಿಧಿ ನೆರವೇರಿಸಲು ಆಗಸ್ಟ್ ನಲ್ಲಿ ಆರು ದಿನಗಳ ಕಾಲ ದೇವಾಲಯ ಸಂಕೀರ್ಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎನ್ನುವ ಟಿಟಿಡಿ ಪ್ರಕಟಣೆಗೆ ಭಕ್ತಾದಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಹ ಟಿಟಿಡಿ ತನ್ನ ಈ ನಿರ್ಧಾರವನ್ನು ಪುನರ್ ಪರಿಶೀಲಿಸಲು ಆಗ್ರಹಿಸಿದ್ದರು.
ಮಂಗಳವಾರ ಮಾಧ್ಯಮಗಳೊಡನೆ ಮಾತನಾಡಿದ ಟಿಟಿಡಿ ಇಒ ಅನಿಲ್ ಕುಮಾರ್ ಸಿಂಘಾಲ್, ಟಿಟಿಡಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಭಕ್ತರ ಅಭಿಪ್ರಾಯಗಳನ್ನು ಪರಿಗಣಿಸಲಿದೆ ಎಂದರು.ಧಾರ್ಮಿಕ ವಿಧಿಗಳ ಆಚರಣೆ ವೇಳೆ ದೇವಾಲಯ ಮುಚ್ಚುವದರಿಂದ ಭಕ್ತಾದಿಗಳಿಗೆ ಅನಾನುಕೂಲವಾಗಲಿದೆ. ಹೀಗಾಗಿ ಇದನ್ನು ತಪ್ಪಿಸಲು ಸೀಮಿತ ಸಂಖ್ಯೆಯ ಭಕ್ತರಿಗೆ ಶ್ರೀವಾರಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.ಆದರೆ, ಜುಲೈ 24 ರಂದು ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಲ್ಲಿಯವರೆಗೆ ಭಕ್ತರು, ಮತ್ತು ತಜ್ಞರ ಅಭಿಪ್ರಾಯಗಳನ್ನು ನಾವು ಪರಿಶೀಲಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಶುದ್ದೀಕರಣ ಕಾರ್ಯ ನಡೆಯುವ ದಿನ ಭಕ್ತರು ದಿನಕ್ಕೆ ಮೂರು ಅಥವಾ ನಾಲ್ಕು ಗಂಟೆಗಳ ಕಾಲ ದೇವರ ದರ್ಶನ ಪಡೆಯಬಹುದಾಗಿದೆ. ಇದರರ್ಥ 25,000-30,000 ಯಾತ್ರಿಕರು ಪ್ರತಿದಿನ ದರ್ಶನವನ್ನು ಹೊಂದಲಿದ್ದಾರೆ.
ದೇವಾಲಯಕ್ಕೆ ಸಣ್ಣ ಸಣ್ಣ ತಂಡಗಳಲ್ಲಿ ಭಕ್ತಾದಿಗಳು ಪ್ರವೇಶಿಸಬಹುದು ಎಂದು ದೇವಾಲಯದ ಮೂಲಗಳು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos