ನವದೆಹಲಿ: ಶಿಸ್ತು ಉಲ್ಲಂಘಿಸಿದ ಆರೋಪದಡಿ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರಿಗೆ 10 ಸಾವಿರ ರುಪಾಯಿ ದಂಡ ವಿಧಿಸಿದ್ದ ಜವಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು) ಆದೇಶವನ್ನು ಶುಕ್ರವಾರ ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
ಕನ್ಹಯ್ಯ ಕುಮಾರ್ ವಿರುದ್ಧದ ಜೆಎನ್ ಯು ಆದೇಶ ಕಾನೂನುಬಾಹಿರ ಮತ್ತು ಅಸಂಬದ್ಧವಾದುದು ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ ಸೂಕ್ತ ವಿಚಾರಣೆ ಬಳಿಕ ನಿರ್ಧಾರ ತೆಗೆದುಕೊಳ್ಳುವಂತೆ ವಿವಿಗೆ ಸೂಚಿಸಿದೆ.
2016ರಲ್ಲಿ, ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರು ಗಲ್ಲು ಶಿಕ್ಷೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಬಂಧಿಸಿದಂತೆ ಜೆಎನ್ ಯು ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್, ತಮಗೆ ಅಶಿಸ್ತಿನ ಆರೋಪದ ಮೇಲೆ ದಂಡ ವಿಧಿಸಿದ್ದನ್ನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್ ಯು ರಚಿಸಿದ್ದ ಉನ್ನತ ಮಟ್ಟದ ಸಮಿತಿ ಕನ್ಹಯ್ಯ ಸೇರಿದಂತೆ 13 ವಿದ್ಯಾರ್ಥಿಗಳಿಗೆ ದಂಡ ವಿಧಿಸಿತ್ತು. ಅಲ್ಲದೆ ಸಮಿತಿ ಉಮರ್ ಖಾಲಿದ್ ಉಚ್ಚಾಟನೆಗೂ ಶಿಫಾರಸು ಮಾಡಿತ್ತು.
ಬಳಿಕ ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ, ಜೆಎನ್ಯೂ ನಿರ್ಧಾರವನ್ನ ತಳ್ಳಿ ಹಾಕಿರುವ ಕೋರ್ಟ್, ಮೇಲ್ಮನವಿ ಪ್ರಾಧಿಕಾರದ ಮುಂದೆ ಸಮಿತಿ ನಿರ್ಧಾರವನ್ನ ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿದೆ.