ನವದೆಹಲಿ: ಆಹಾರವಿಲ್ಲದೆ ಹಸಿವಿನಿಂದ ಮೂವರು ಸಹೋದರಿಯರು ಸಾವನ್ನಪ್ಪಿದ ಪ್ರಕರಣದಲ್ಲಿ ಮತ್ತೊಂದು ಅಂಶ ಬೆಳಕಿಗೆ ಬಂದಿದ್ದು, ಪ್ರಾಥಮಿಕ ವಿಚಾರಣಾ ವರದಿಯ ಪ್ರಕಾರ ತಂದೆಯೇ ಮಕ್ಕಳಿಗೆ ವಿಷಪ್ರಾಶನ ಮಾಡಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಲ್ಲಿಸಿರುವ ವರದಿಯ ಪ್ರಕಾರ ಹಿರಿಯ ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ಹಣವಿದ್ದು ಬಡತನದ ಕಾರಣದಿಂದ ಹಸಿದುಕೊಂಡಿರಲಿಲ್ಲ ಎಂಬುದು ತಿಳಿದುಬಂದಿದೆ. ಮಾನ್ಸಿ (8), ಶಿಖಾ (4), ಪರುಲ್ (2) ಮೃತಪಟ್ಟ ಸಹೋದರಿಯರಾಗಿದ್ದಾರೆ. ಪೂರ್ವ ದೆಹಲಿಯ ಮಂಡವಾಲಿ ಕೊಳಗೇರಿಯಲ್ಲಿರುವ ಮನೆಯೊಂದರಲ್ಲಿ ಮೃತದೇಹಗಳು ಪತ್ತೆಯಾಗಿದ್ದ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಘಟನೆ ಬಗ್ಗೆ ಸರ್ಕಾರಕ್ಕೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವರದಿ ಸಲ್ಲಿಸಿದ್ದು, ಸಾಯುವ ಸಮಯದಲ್ಲಿ ಮೂವರು ಮಕ್ಕಳ ಪೌಷ್ಟಿಕಾಂಶದ ಸ್ಥಿತಿ ಉತ್ತಮವಾಗಿರಲಿಲ್ಲ, ಅವರಿಗೆ ವಾಂತಿ ಹಾಗೂ ಅತಿಸಾರದ ಸಮಸ್ಯೆ ಕಾಡುತ್ತಿತ್ತು ಎಂದು ಹೇಳಲಾಗಿದೆ. ಮೂವರು ಮಕ್ಕಳ ಪೈಕಿ ಹಿರಿಯ ಮಗುವಿನ ಖಾತೆಯಲ್ಲಿ 1805 ರೂಪಾಯಿಗಳಿತ್ತು ಎಂದು ತಿಳಿದುಬಂದಿದೆ. ಮಕ್ಕಳ ತಾಯಿ ಮಾನಸಿಕವಾಗಿ ಸದೃಢವಾಗಿಲ್ಲದ ಕಾರಣ ಘಟನೆ ಬಗ್ಗೆ ಸ್ಪಷ್ಟತೆ ಸಿಗುತ್ತಿ;;ಅ.
ಮೂವರು ಮಕ್ಕಳು ಸಾಯುವುದಕ್ಕೂ ಹಿಂದಿನ ರಾತ್ರಿ ಅವರ ತಂದೆ ಬಿಸಿ ನೀರಿನಲ್ಲಿ ಔಷಧವನ್ನು ಬೆರೆಸಿ ನೀಡಿದ್ದರು ಇದಾದ ಬಳಿಕ ಆ ವ್ಯಕ್ತಿಯೂ ಕಣ್ಮರೆಯಾಗಿರುವುದು ಅನುಮಾನ ಮೂಡಿಸಿದೆ, ಮತ್ತಷ್ಟು ಸ್ಪಷ್ಟತೆ ಸಿಗಬೇಕಾದರೆ ಆಳವಾದ ತನಿಖೆ ನಡೆಸುವ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ.