ನವದೆಹಲಿ: ನಾನ್ ಪರ್ಫಾಮಿಂಗ್ ಅಸೆಟ್ಸ್ ಗೆ ಸಂಬಂಧಿಸಿದಂತೆ ಮಾರ್ಗಸೂಚಿ ಸಿದ್ಧಪಡಿಸಲು ಬ್ಯಾಂಕ್ ಗಳಿಗೆ ಸಂಸತ್ ಸಮಿತಿ ಸೂಚನೆ ನೀಡಿದೆ.
ಬ್ಯಾಂಕ್ ಗಳಿಗೆ ಬರಬೇಕಿರುವ ಬಾಕಿ ಸಾಲವನ್ನು ಉಲ್ಲೇಖಿಸಿರುವ ಸಂಸತ್ ಸಮಿತಿ, ಬ್ಯಾಂಕಿಂಗ್ ಹಗರಣಗಳಲ್ಲಿ ಬ್ಯಾಂಕ್ ನ ಅಧಿಕಾರಿಗಳು ಹಾಗೂ ಬ್ಯಾಂಕ್ ಸದಸ್ಯರ ನಂಟನ್ನೂ ಪ್ರಶ್ನಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಸೇರಿದಂತೆ ಇತರ ಬ್ಯಾಂಕ್ ಹಗರಣಗಳು ನಡೆದಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಉರ್ಜಿತ್ ಪಟೇಲ್ ಸಮಿತಿಯ ಎದುರು ಮುಂದಿನ ವಾರ ಹಾಜರಾಗಲಿದ್ದು, ಇದಕ್ಕೂ ಮುನ್ನ ಸಂಸದೀಯ ಸಮಿತಿ ಸಭೆ ನಡೆಸಿದೆ.
ವಂಚನೆ ಪ್ರಕರಣಗಳನ್ನು ತಡೆಗಟ್ಟುವುದರಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಪ್ರತಿನಿಧಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಸಮಿತಿಯ ಸದಸ್ಯರು ಪ್ರತಿನಿಧಿಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಧ್ಯಕ್ಷ ಸುನಿಲ್ ಮೆಹ್ತಾ ಸಹ ಭಾಗಿಯಾಗಿದ್ದರು.