ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಅಹಮದಾಬಾದ್: ಇಶ್ರತ್ ಜಹಾನ್ ನಕಲಿ ಎನ್'ಕೌಂಟರ್ ಆರೋಪ ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಬಂಧನಕ್ಕೊಳಪಡಿಸಲು ಸಿಬಿಐ ಬಯಸಿತ್ತು ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಇಶ್ರತ್ ಜಹಾನ್ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಡಿಐಜಿ ವಂಝಾರಾ ಅವರು ನ್ಯಾಯಾಲಯದ ಮುಂದೆ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಇಶ್ರತ್ ಜಹಾನ್ ಪ್ರಕರಣದಲ್ಲಿ ಅಂದಿನ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ಬಂಧಿಸಲು ಸಿಬಿಐ ನಿರ್ಧರಿಸಿದ್ದು ಎಂದು ವಂಜಾರಾ ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇಶ್ರತ್ ಜಹಾನ್ ಪ್ರಕರಣದಿಂದ ತಮ್ಮ ಹೆಸರನ್ನು ಕೈ ಬಿಡುವಂತೆ ಕೋರಿ ವಂಝಾರಾ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತ ವಿಚಾರಣೆ ವೇಲೆ ವಂಝಾರಾ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದು, ವಂಝಾರಾ ಅವರ ಹೇಳಿಕೆ ಇದೀಗ ಭಾರೀ ಸಂಚಲನವನ್ನು ಮೂಡಿಸಿದೆ.
ಮೋದಿ ಹಾಗೂ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಲು ನಿರ್ಧರಿಸಿತ್ತು. ಆದರೆ, ಅದೃಷ್ಟವಶಾತ್ ಬಂಧಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಸಾಕ್ಷ್ಯಾಧಾರ ಕೊರೆತೆ ಹಿನ್ನಲೆಯಲ್ಲಿ 2014ರಲ್ಲಿ ಸಿಬಿಐ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಪೊಲೀಸ್ ಅಧಿಕಾರಿಗಳ ವಿರುದ್ಧದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿದೆ.
ಈ ಹಿಂದೆ ವಂಝಾರಾ ಅವರು ಮೋದಿ ಕುರಿತು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದರು. ಮೋದಿಯವರು ಗುಜರಾತ್ ರಾಜ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಹಸ್ಯವಾಗಿ ಪ್ರಕರಣದ ಬಗ್ಗೆ ಅವರನ್ನು ವಿಚಾರಣಾ ದೃಷ್ಟಿಯಿಂದ ಪ್ರಶ್ನಿಸಲಾಗಿದ್ದು ಎಂದು ದಾಖಲೆ ಸಲ್ಲಿಸಿದ್ದರು.
2004ರ ಜೂನ್ ತಿಂಗಳಿನಲ್ಲಿ ಇಶ್ರತ್ ಜಹಾನ್ ಸೇರಿದಂತೆ ಒಟ್ಟು ನಾಲ್ವರನ್ನು ಶಂಕಿತ ಉಗ್ರರೆಂದು ಎನ್ ಕೌಂಟರ್ ಮಾಡಲಾಗಿತ್ತು.