ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ನಿನ್ನೆ ರಾತ್ರಿಯಿಡೀ ಲೆ. ಗವರ್ನರ್ ಕಛೇರಿಯಲ್ಲೇ ಕಳೆದದಿದ್ದಾರೆ.
ಐಎಎಸ್ ಅಧಿಕಾರಿಗಳು ತಮ್ಮ ಮುಷ್ಕರ ನಿಲ್ಲಿಸುವಂತೆ ಗವರ್ನರ್ ನಿರ್ದೇಶನ ನೀಡಬೇಕು. ನಾಲ್ಕು ತಿಂಗಳಿನಿಂದ ಕೆಲಸ ಮಾಡದೆ ಅಡ್ಡಿಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎನ್ನುವ ಬೇಡಿಕೆ ಸೇರಿ ಅನೇಕ ಬೇಡಿಕೆಯನ್ನಿಟ್ಟು ಅವರು ಲೆ. ಗವರ್ನರ್ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದ್ದರು.
ಮುಖ್ಯಮಂತ್ರಿ ಕೇಜ್ರಿವಾಲ್ ಜತೆಗೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಇಬ್ಬರು ಮಂತ್ರಿಗಳಾದ ಗೋಪಾಲ್ ರೈ ಮತ್ತು ಸತ್ಯೇಂದರ್ ಜೈನ್ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ಅನಿಲ್ ಬೈಜಾಲ್ ರನ್ನು ಸಂಜೆ 5.30 ಕ್ಕೆ ಭೇಟಿ ಮಾಡಿದ್ದರು..
ನಿನ್ನೆ ರಾತ್ರಿ ಲೆಫ್ಟಿನೆಂಟ್ ಗವರ್ನರ್ ಕಛೇರಿಯಲ್ಲೇ ಕಳೆದಿದ್ದ ಕೇಜ್ರಿವಾಲ್ ಮನೆಯಿಂದ ರಾತ್ರಿಯ ಊಟ ಹಾಗೂ ಮಧುಮೇಹಕ್ಕಾಗಿ ಇನ್ಸುಲಿನ್ ಅನ್ನೂ ತರಿಸಿಕೊಂಡಿದ್ದಾರೆ.
ದೆಹಲಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಲೆ.ಗವರ್ನರ್ ಕಛೇರಿಯಲ್ಲಿ ಇಡೀ ರಾತ್ರಿ ಕಳೆದಿದ್ದಾರೆ ಎಂದು ಮೂಲಗಳು ಹೇಳಿದೆ. ಎಲ್-ಜಿ ಕಛೇರಿಯಿಂದ ಬೆಳಿಗ್ಗೆ 6.27ಕ್ಕೆ ಟ್ವೀಟ್ ಮಾಡಿದ ಮುಖ್ಯಮಂತ್ರಿಗಳು "ನನ್ನ ಪ್ರೀತಿಯ ದೆಹಲಿ ಜನಗಳೇ ಬೆಲಗಿನ ಶುಭಾಶಯಗಳು, ಹೋರಾಟ ಮುಂದುವರಿದಿದೆ" ಎಂದಿದ್ದಾರೆ.
ಏತನ್ಮಧ್ಯೆ ಎಲ್-ಜಿ ಕಛೇರಿಯ ಮುಂದೆ ಹಲವಾರು ಎಎಪಿ ಶಾಸಕರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹ ನೆರೆದಿದ್ದು ಪೋಲೀಸರು ಇಡೀ ಪ್ರದೇಶದ ಸುತ್ತ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ.