ಪಲಿ (ರಾಜಸ್ತಾನ): ನನ್ನ ವಿರುದ್ಧ ಆರೋಪ ಮಾಡುತ್ತಿರುವ ಯುವತಿ ನನ್ನ ಮಗಳಿದ್ದಂತೆ ಎಂದು ಆತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ದಾತಿ ಮಹಾರಾಜ್ ಅವರು ಗುರುವಾರ ಹೇಳಿದ್ದಾರೆ.
ಅತ್ಯಾಚಾರ ಆರೋಪ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ವಿರುದ್ಧ ಆರೋಪ ಮಾಡುತ್ತಿರುವ ಯುವತಿ ನನ್ನ ಮಗಳಿದ್ದಂತೆ. ಆದರೆ, ಆಕೆಯ ವಿರುದ್ಧ ನಾನೇನನ್ನೂ ಮಾತನಾಡುವುದಿಲ್ಲ. ನನ್ನನ್ನು ಗಲ್ಲಿಗೇರಿಸಿದರೂ ಆಕೆಯನ್ನು ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.
ಆರೋಪ ಮಾಡುತ್ತಿರುವ ಯುವತಿ ನನ್ನ ಮಗಳಾಗಿದ್ದು, ಆದರೆ, ವಿರುದ್ದ ನಾನು ಯಾವುದೇ ರೀತಿಯ ಆರೋಪಗಳನ್ನು ಮಾಡುವುದಿಲ್ಲ. ನನ್ನನ್ನು ಗಲ್ಲಿಗೇರಿಸಿದರೂ ಸರಿ ಆಕೆಯನ್ನು ನಾನು ದೂಷಿಸುವುದಿಲ್ಲ. ನಾನು ತಪ್ಪು ಮಾಡಿರುವುದೇ ಆದರೆ, ಅಧಿಕಾರಿಗಳು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಿ. ತನಿಖೆಗೆ ಸಹಕರಿಸುತ್ತೇನೆಂದು ತಿಳಿಸಿದ್ದಾರೆ.
25 ವರ್ಷದ ಯುವತಿಯೊಬ್ಬರು ದಾತಿ ಮಹಾರಾಜ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಪ್ರಕರಣ ಕೆಲ ದಿನಗಳ ಹಿಂದಷ್ಟೇ ದೆಹಲಿ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿತ್ತು.
ದೂರಿನಲ್ಲಿ ಯುವತಿ ದಾತಿ ಮಹಾರಾಜ್ ಹಾಗೂ ಅವರ ಶಿಷ್ಯರು ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಹೇಳಿಕೊಂಡಿದ್ದರು.
10 ವರ್ಷಗಳಿಂದ ಸ್ವಯಂ ಘೋಷಿತ ದೇವಮಾನವನ ಅನುಯಾಯಿಯಾಗಿದ್ದು, ದೇವಮಾನವ ಮತ್ತು ಆತನ ಇಬ್ಬರು ಶಿಷ್ಯರು ತನ್ನ ಮೇಲೆ ಅತ್ಯಾಚಾರ ಮಾಡಲಾರಂಭಿಸಿದ ಬಳಿಕ ತವರು ರಾಜ್ಯ ರಾಜಸ್ತಾನಕ್ಕೆ ಹಿಂದಿರುಗಿದ್ದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದರು.
ಪ್ರಕರಣ ಸಂಬಂಧ ದೆಹಲಿ ಪೊಲೀಸರು ಬುಧವಾರವಷ್ಟೇ ಅತ್ಯಾಚಾರ ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದರು. ಇದರಂತೆ ದಾತಿ ಮಹಾರಾಜ್ ಅವರು ದೇಶದಿಂದ ಹೊರ ಹೋಗದಂತೆ ಲುಕ್ಔಟ್ ನೋಟಿಸ್ ಜಾರಿ ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.