ತಂದೆ ಬೈಯ್ದದ್ದಕ್ಕೆ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಪುತ್ರ!
ಪಾಕೂರ್ (ಜಾರ್ಖಂಡ್): ತಂದೆ ಬೈಯ್ದರೆಂಬ ಕಾರಣಕ್ಕೆ ಮಗನೊಬ್ಬ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾರ್ಖಂಡ್ ನ ಪಾಕೂರ್ ಜಿಲ್ಲೆ ಬಹುದಹ ಎನ್ನುವಲ್ಲಿ ನಡೆದಿದೆ.
19ದ ಹರೆಯದ ಯುವಕ ಬೀಮಾಲ್ ಪಾಲ್ ಆತ್ಮಹತ್ಯೆಗೆ ಮುಂದಾದ ಯುವಕನಾಗಿದ್ದು ಯುವಕನ ಹೊಟ್ಟೆಯಲ್ಲಿ ಗಟ್ಟಿಯಾಗಿದ್ದ ಸಿಮೆಂಟ್ ಅನ್ನು ಪಶ್ಚಿಮ ಬಂಗಾಳದ ವರ್ಧಮಾನ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿದೆ.
ಬೀಮಾಲ್ ನ ತಂದೆ ಆ ಊರಿನಲ್ಲಿ ಪ್ರಸಿದ್ದರಾದ ಕುಂಬಾರರಾಗಿದ್ದು ಮಗ ತಾನು ಮಾಡುವ ಕೆಲಸಕ್ಕೆ ನೆರವಾಗದೆ ಸದಾ ಮೊಬೈಲ್ ನೋಡಿಕೊಂಡಿರುವುದನ್ನು ಕಂಡ ತಂದೆ ಬೇಸರದಿಂದ ಬೈದಿದ್ದಾರೆ. ಅಲ್ಲದೆ ದೃಷ್ಟಿದೋಷವಿದ್ದ ಆತನಿಗೆ ಆತನ ಸ್ನೇಹಿತರು ಸಹ "ನಿನು ಮುಂದೊಂದು ದಿನ ಸಂಪೂರ್ಣ ಕುರುಡನಾಗಲಿದ್ದೀಯೆ, ಆಗ ನಿನ್ನಿಂದ ಯಾವ ಕೆಲಸಗಳನ್ನು ಮಾಡಲಾಗುವುದಿಲ್ಲ" ಎಂದು ವ್ಯಂಗ್ಯವಾಡುತ್ತಿದ್ದರು. ಇದೆಲ್ಲದರಿಂದ ಖಿನ್ನತೆಗೊಳಗಾದ ಯುವಕ ಬೀಮಾಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಂದೆ ಮಡಿಕೆ, ಮೂರ್ತಿಗಳನ್ನು ಮಾಡಲಿಕ್ಕೆಂದು ಕಲಸಿಟ್ಟಿದ್ದ ಸಿಮೆಂಟ್ ಕಾಂಕ್ರೀಟ್ ಅನ್ನು ತಿಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನೋಡಿದ್ದಾನೆ. ಹೀಗೆ ಸಿಮೆಂಟ್ ತಿಂದ ಬೀಮಾಲ್ ಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮೊದಲಿಗೆ ಆಸ್ಪತ್ರೆಗೆ ದಾಖಲಾಗಲು ಒಪ್ಪದ ಯುವಕನನ್ನು ಬಳಿಕ ಬರ್ದ್ವಾನದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
"ಸ್ನೇಹಿತರ ಮಾತನ್ನು ತಲೆಗೆ ಹಚ್ಚಿಕೊಳ್ಳಬೇಡ ಎನ್ನುವುದಾಗಿ ನಾನು ಅನೇಕ ಬಾರಿ ಹೇಳುತ್ತಿದ್ದೆ. ಕಣ್ಣಿನ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿಯೂ ಹೇಳಿದ್ದೆ. ಕೆಲವೊಮ್ಮೆ ಅವನು ನನಗೆ ಕೆಲಸದಲ್ಲಿ ಸಹಕರಿಸದೆ ಮೊಬೈಲ್ ನಲ್ಲೇ ಸದಾ ಮುಳುಗಿರುತ್ತಿದ್ದ. ಆಗ ನಾನು ಅವನನ್ನು ಬೈಯ್ದದ್ದಿದೆ. ಇದಕ್ಕೆ ಬೇಸರಪಟ್ಟು ಆತ ಇಂತಹಾ ಕೃತ್ಯ ಎಸಗುವನೆಂದು ಭಾವಿಸಿರಲಿಲ್ಲ" ಬೀಮಾಲ್ ನ ತಂದೆ ನುಡಿದರು.
ಶಸ್ತ್ರಚಿಕಿತ್ಸೆ ಬಳಿಕ ಮಾತನಾಡಿದ ವೈದ್ಯ ಡಾ. ಸ್ನೇಹಾಂಶು ಪಾನ್ "ನಮ್ಮಲ್ಲಿಯೂ ಉತ್ತಮ ವೈದ್ಯರಿದ್ದಾರೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಯಾವ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಆಗಬೇಕಾದಲ್ಲಿ ರೋಗಿಗಳನ್ನು ಕೋಲ್ಕತ್ತಾ ಅಥವಾ ದಕ್ಷಿಣ ಭಾರತಕ್ಕೆ ಸಾಗಿಸಲಾಗುತ್ತದೆ. ಆದರೆ ಈ ಯಶಸ್ವಿ ಶಸ್ತ್ರಚಿಕಿತ್ಸೆಯು ನಮ್ಮಲ್ಲಿನ ಸಾಮರ್ಥ್ಯವನ್ನು ತೋರಿಸಿದೆ" ಎಂದರು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos