ನವದೆಹಲಿ: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೆ ಲಂಡನ್ ನಲ್ಲಿ 'ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ' ವಿಜಯ್ ಮಲ್ಯ ಅವರಿಗೆ ಶನಿವಾರ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು 'ತಲೆಮರೆಸಿಕೊಂಡಿರುವ ಅಪರಾಧಿ' ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ(ಇಡಿ) ಜೂನ್ 22ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಆಗಸ್ಟ್ 27ರೊಳಗೆ ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸಮನ್ಸ್ ನೀಡಿದೆ.
ವಿಜಯ್ ಮಲ್ಯ ಅವರು ಆಗಸ್ಟ್ 27ರೊಳಗೆ ವಿಚಾರಣೆಗೆ ಹಾಜರಾಗದಿದ್ದರೆ ಕೋರ್ಟ್ ಮದ್ಯದ ದೊರೆ ತಲೆಮರೆಸಿಕೊಂಡಿರುವ ಅಪರಾಧಿ ಎಂದು ಘೋಷಿಸುತ್ತದೆ. ಅಲ್ಲದೆ ವಿಜಯ್ ಮಲ್ಯ ಅವರಿಗೆ ಸೇರಿದ 12,500 ಕೋಟಿ ರುಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲು ಇಡಿಗೆ ಕೋರ್ಟ್ ಅನುಮತಿ ನೀಡಲಿದೆ.
ಇದಕ್ಕು ಮುನ್ನ ತಮ್ಮ ವಿರುದ್ಧದ ಕೆಲವು ಆರೋಪಗಳನ್ನು ಕೈಬಿಡಬೇಕೆಂದು ಚೌಕಾಶಿ ಮಾಡಿದ್ದಾರೆ ಎಂಬ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಆರೋಪವನ್ನುತಳ್ಳಿಹಾಕಿದ್ದ ವಿಜಯ್ ಮಲ್ಯ, ಚೌಕಾಶಿ ಮಾಡುತ್ತಿದ್ದೇನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಧಿಕಾರಿಗಳು ಮೊದಲು ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯನ್ನು ಓದಲಿ ಎಂಬುದು ನನ್ನ ಸವಿನಯ ಸಲಹೆಯಾಗಿದೆ. ನನ್ನ ಆಸ್ತಿಯ ಲೆಕ್ಕ ತೋರಿಸಿದ ನ್ಯಾಯಾಲಯದ ಎದುರು ಅದೇ ಮನವಿಯನ್ನು ಮಂಡಿಸಲಿ ಎಂದು ನಾನು ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನು ಕೇಳುತ್ತೇನೆ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದರು.