ನವದೆಹಲಿ: ಭ್ರಷ್ಠಾಚಾರ ವಿರೋಧಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಭಾನುವಾರ ಸಿಬ್ಬಂದಿ ಆಯ್ಕೆ ಆಯೋಗ (ಎಸ್ .ಎಸ್ . ಸಿ) ಆಯುಕ್ತರನ್ನು ಭೇಟಿಯಾಗಿದ್ದಾರೆ.
ಪ್ರತಿಭಟನಾಕಾರರನ್ನು ಭೇಟಿಯಾದ ಹಜಾರೆ ಅಹಿಂಸೆಯ ಹಾದಿಯಲ್ಲಿ ಪ್ರತಿಭಟನೆ ನಡೆಸುವಂತೆ ಹೇಳಿದರಲ್ಲದೆ ಸರ್ಕಾರ ಇವರ ಹೋರಾಟದತ್ತ ಗಮನ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ಡಾರೆ.
"ಅನ್ಯಾಯ ಹಾಗೂ ಕಿರುಕುಳವನ್ನು ಎದುರಿಸಿ ಹೋರಾಡುವಾಗ ಅಹಿಂಸೆಯ ಹಾದಿಯಲ್ಲಿ ನಡೆಯುವುದು ಬಹಳ ಮುಖ್ಯ. ಇದು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಸರ್ಕಾರ ತೀರ್ಮಾನ ಕೈಗೊಳ್ಳುವವರೆಗೆ ನಾವು ಕಾಯಬೇಕಿದೆ. ನಂತರ ನಾವೇನು ಮಾಡಬೇಕೆನ್ನುವುದನ್ನು ನಿರ್ಧರಿಸೋಣ. ಈ ಮಧ್ಯೆ, ನಿಮ್ಮ ಹೋರಾಟ ಹಿಂಸಾ ಸ್ವರೂಪ ಪಡೆದುಕೊಳ್ಳಬಾರದೆಂದು ನಾನು ಮನವಿ ಮಾಡುತ್ತೇನೆ." ಹಜಾರೆ ಹೇಳಿದ್ದಾರೆ.
ಫೆ.27ರಿಂದ ಈಚೆಗೆ ದೆಹಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಎಸ್.ಎಸ್.ಸಿ.ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಯೋಗದ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ನಡೆದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ.
ಆದರೆ ಫೆ.24ರಂದು ಎಸ್.ಎಸ್.ಸಿ. ಹೊರಡಿಸಿದ್ದ ನೋಟೀಸ್ ನಲ್ಲಿ ಫೆ.21 ರಂದು ಆಯೋಗ ನಡೆಸಿದ್ದ ಪರೀಕ್ಷೆಯು ತಾಂತ್ರಿಕ ಕಾರಣಗಳಿಂದ ವಿಫಲವಾಗಿದೆ. ಇದಕ್ಕಾಗಿ ಮಾ.9ರಂದು ಪುನಃಅ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿತ್ತು.