ನವದೆಹಲಿ: ನಾಳೆ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಸದನ ಸಮಿತಿ ಹೊಸದಾಗಿ ನೀಡಿರುವ ನೋಟಿಸ್ ವಿರುದ್ಧ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರು ಬುಧವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಹಂಗಾಮಿ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ನ್ಯಾಯಾಮೂರ್ತಿ ಸಿ ಹರಿ ಶಂಕರರ್ ಅವರು, ಅರ್ಜಿಯ ವಿಚಾರಣೆಯನ್ನು ನಾಳೆ ಏಕ ಸದಸ್ಯ ಪೀಠಕ್ಕೆ ನೀಡಿದ್ದಾರೆ.
ದೆಹಲಿ ವಿಧಾನಸಭೆಯ ಪ್ರಶ್ನೆ ಮತ್ತು ಉಲ್ಲೇಖ ಸಮಿತಿ ಅಂಶು ಪ್ರಕಾಶ್ ಅವರಿಗೆ ನೋಟಿಸ್ ನೀಡಿದೆ.
ಈ ಹಿಂದೆ ದೆಹಲಿ ವಿಧಾನಸಭೆಯ ನಿಲುವಳಿ ಸಮಿತಿ ಅಂಶು ಪ್ರಕಾಶ್ ಅವರಿಗೆ ನೀಡಿದ್ದ ನೋಟಿಸ್ ಗೆ ಹೈಕೋರ್ಟ್ ಏಕ ಸದಸ್ಯ ಪೀಠ ತಡೆ ನೀಡಿದೆ. ಈಗ ಮತ್ತೊಂದು ಸದನ ಸಮಿತಿ ನೋಟಿಸ್ ನೀಡಿದ್ದು ಅದಕ್ಕು ತಡೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಲಾಗಿದೆ ಎಂದು ಅಂಶು ಪ್ರಕಾಶ್ ಪರ ವಕೀಲರು ತಿಳಿಸಿದ್ದಾರೆ.
ಅಂಶು ಪ್ರಕಾಶ್ ಅವರ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರು ಹಲ್ಲೆ ನಡೆಸಿದ ಮಾರನೇ ದಿನ ಫೆ.20ರಂದು ನಿಗದಿಯಾಗಿದ್ದ ಪ್ರಶ್ನೆ ಮತ್ತು ಉಲ್ಲೇಖ ಸದನ ಸಮಿತಿ ಸಭೆಗೆ ಮುಖ್ಯ ಕಾರ್ಯದರ್ಶಿ ಗೈರು ಆಗಿದ್ದರು. ಅಲ್ಲದೆ ಫೆ.21 ಮತ್ತು 23ರಂದು ನಡೆದ ಸಭೆಗೂ ಅವರು ಗೈರು ಆಗಿದ್ದರು. ಈ ಹಿನ್ನೆಲೆಯಲ್ಲಿ ಸದನ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮಾರ್ಚ್ 1ರಂದು ನೋಟಿಸ್ ನೀಡಲಾಗಿತ್ತು.