ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಗರಣ ಸಂಬಂಧ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿದೆ.
ಮುಂದಿನ ವಿಚಾರಣೆವರೆಗೂ ಕಾರ್ತಿ ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸುವಂತಿಲ್ಲ ಎಂದು ಕೋರ್ಟ್ ನಿರ್ದೇಶನ ನೀಡಿದೆ. ಹಣ ಅಕ್ರಮ ವರ್ಗಾವಣೆ ಸಂಬಂಧ ಕಳೆದ ವಾರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು, ಮಾರ್ಚ್ 9 ರವರೆಗೂ ಸಿಬಿಐ ಕಸ್ಟಡಿಗೆ ತೆಗೆದುಕೊಂಡಿತ್ತು, ಇಂದು ಕಾರ್ತಿ ಚಿದಂಬರಂ ಸಿಬಿಐ ಕಸ್ಟಡಿ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಮಾರ್ಚ್ 20 ರವರೆಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸುವಂತಿಲ್ಲ ಎಂದು ತಿಳಿಸಿದೆ,
ಇಂದು ದೆಹಲಿ ಹೈಕೋರ್ಟ್ ಆದೇಶದ ಪ್ರಕಾರ, ಒಂದು ವೇಳೆ ಸಿಬಿಐ ಕೇಸ್ ನಲ್ಲಿ ವಿಚಾರಣಾ ನ್ಯಾಯಾಲಯ ಕಾರ್ತಿ ಚಿದಂಬರಂಗೆ ಜಾಮೀನು ನೀಡಿದರೇ ಅಲ್ಲಿಯವರೆಗೆ, ಜಾರಿ ನಿರ್ದೇಶನಾಲಯ ಕಾರ್ತಿ ಅವರನ್ನು ಬಂಧಿಸಬಾರದೆಂದು ಸೂಚನೆ ನೀಡಿದೆ. ಮಾರ್ಚ್ 9ರ ವರೆಗೂ ಸಿಬಿಐ ಕಸ್ಟಡಿಗೆ ವಹಿಸಲಾಗಿತ್ತು. ಹೀಗಾಗಿ ಮಾರ್ಚ್ 20ರ ವರೆಗೂ ಅಂದರೆ ಮುಂದಿನ ವಿಚಾರಣೆವರೆಗೂ ಬಂಧಿಸುವಂತಿಲ್ಲ ಎಂದು ಹೇಳಿದೆ.
ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು, ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಅನ್ನು ವಜಾಗೊಳಿಸಬೇಕೆಂದು ಕಾರ್ತಿ ಚಿದಂಬರಂ ದೆಹಲಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.