ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ವಕೀಲ ಅಮಿತ್ ಸಿಬಲ್ ಅವರು ದಾಖಲಿಸಿದ್ದ ಎರಡು ಪ್ರತ್ಯೇಕ ಮಾನಹಾನಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.
ದೆಹಲಿ ಸಿಎಂ ಕೇಜ್ರಿವಾಲ್ ಅವರು ಗಡ್ಕರಿ ಮತ್ತುಸಿಬಲ್ ಇಬ್ಬರಲ್ಲೂ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ.
ಕೇಜ್ರಿವಾಲ್ ಅವರು ಸಿಬಲ್ ಅವರ ಕ್ಷಮೆ ಕೇಳಿದ ಪತ್ರವನ್ನು ತಮ್ಮ ವಕೀಲರ ಮೂಲಕ ಕೋರ್ಟ್ ಗೆ ಸಲ್ಲಿಸಿದ ನಂತರ ಹೆಚ್ಚುವರಿ ಚೀಫ್ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ದೆಹಲಿ ಸಿಎಂ ಕೇಜ್ರಿವಾಲ್ ಮತ್ತುಸಹ ಆರೋಪಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರನ್ನು ಖುಲಾಸೆಗೊಳಿಸಿದ್ದಾರೆ. ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿಗಳಾದ ಪ್ರಶಾತ್ ಭೂಷಣ್ ಮತ್ತು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರ ವಿರುದ್ಧ ವಿಚಾರಣೆ ಮುಂದುವರೆದಿದೆ.
ವೊಡಫೋನ್ ತೆರಿಗೆ ಪರಿಷ್ಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಪಿಲ್ ಸಿಬಲ್ ಅವರ ಪುತ್ರ ಅಮಿತ್ ಸಿಬಲ್ ಅವರ ವಿರುದ್ಧ ಕೇಜ್ರಿವಾಲ್, ಸಿಸೋಡಿಯಾ, ಪ್ರಶಾತ್ ಭೂಷಣ್ ಮತ್ತು ಅಂದು ಆಪ್ ನಾಯಕಿಯಾಗಿದ್ದ ಇಲ್ಮಿ ಆರೋಪ ಮಾಡಿದ್ದರು.
ಈ ನಾಲ್ವರ ವಿರುದ್ಧ ಸಿಬಿಲ್ ಅವರು 2013ರಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು.