ನವದೆಹಲಿ: ಭಾರತದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಪಾಕಿಸ್ತಾನದ ಗೂಢಾಚಾರ ಸಂಸ್ಧೆ ಐಎಸ್ಐ ಸಿಖ್ ಯುವಕರಿಗೆ ತರಬೇತಿ ನೀಡುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಸಂಸತ್ತಿಗೆ ಗೃಹ ಸಚಿವಾಲಯ ತಿಳಿಸಿದೆ.
ಭಾರತದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರದೊಂದಿಗೆ ಕೆನಡಾ ಮತ್ತು ಇತರ ಸ್ಥಳಗಲ್ಲಿ ನೆಲೆಸಿರುವ ಸಿಖ್ ಸಮುದಾಯದ ಯುವಕರ ಮನಸ್ಸಿನಲ್ಲಿ ದ್ವೇಷ ಭಾವನೆ ಮೂಡಿಸಿ ದೇಶದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರು ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗದ ಮೂಲಕ ಭಯೋತ್ಪಾದಕ ಗುಂಪುಗಳು ಯುವಕರನ್ನು ಸೆಳೆಯುತ್ತಿದ್ದು ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ಸೋಮವಾರ ಸಂಸತ್ತಿನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಆಂತರಿಕ ಭದ್ರತಾ ಸವಾಲುಗಳು-ಮೌಲ್ಯಮಾಪನ ಮತ್ತು ಯಾಂತ್ರಿಕ ವ್ಯವಸ್ಥೆಯನ್ನು ಕುರಿತಂತೆ ಮಂಡಿಸಲಾಯಿತು. ಇದರಲ್ಲಿ ಸಿಖ್ ಉಗ್ರಗಾಮಿ ತ್ವದ ಕೆಲವು ಬೆಳವಣಿಗೆಗಳ ಕುರಿತು ಪ್ರಸ್ತಾಪಿಸಲಾಗಿದೆ.
ಪಂಜಾಬ್ ಅಲ್ಲದೆ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದನ ದಾಳಿಗಳನ್ನು ನಡೆಸಲು ಐಎಸ್ಐನಿಂದ ತರಬೇತಿ ಪಡೆದ ಉಗ್ರಗಾಮಿಗಳು ಮುಂದಾಗಿದ್ದಾರೆ. ಪಾಕಿಸ್ತಾನ ಮೂಲದ ಸಿಖ್ ಭಯೋತ್ಪಾದಕರ ಗುಂಪುಗಳು ಭಯೋತ್ಪಾದಕ ದಾಳಿಗಳಿಗೆ ಅನುಕೂಲವಾಗುವಂತೆ ಜೈಲಿನಲ್ಲಿರುವ ಅಪರಾಧಿಗಳು, ನಿರುದ್ಯೋಗಿ ಯುವಕರು, ಅಪರಾಧಿಗಳು ಮತ್ತು ಕಳ್ಳಸಾಗಾಣಿಕೆದಾರರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆಂತಕಕಾರಿ ವಿಷಯ ಬಹಿರಂಗಗೊಂಡಿದೆ.
ಇದೇ ವೇಳೆ ಯೂರೋಪ್, ಅಮೆರಿಕ, ಕೆನಡಾದಲ್ಲಿ ವಾಸಿಸುತ್ತಿರುವ ಸಿಖ್ ಸಮುದಾಯದ ಯುವಕರಲ್ಲಿ ಭಾರತದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರದೊಂದಿಗೆ ದ್ವೇಷ ಭಾವನೆ ಮೂಡಿಸುತ್ತಿದೆ ಎಂದು ತಿಳಿದುಬಂದಿದೆ.