ಪಿಎನ್ಬಿ ವಂಚನೆ ಪ್ರಕರಣ: ಇಡಿ ಯಿಂದ ನೀರವ್ ಮೋದಿ ಆಪ್ತಮಿತ್ರನ ಬಂಧನ
ಮುಂಬೈ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನೀರವ್ ಮೋದಿ ಆಪ್ತಮಿತ್ರ ಫೈರ್ ಸ್ತಾರ್ ಗ್ರೂಪ್ ನ ಉಪಾಧ್ಯಕ್ಷ ಶ್ಯಾಮ್ ಸುಂದರ್ ವಾಧ್ವಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿ ವಾಧ್ವಾ ಅವರನ್ನು ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಇದು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಇಡಿಯಿಂದಾದ ಮೊದಲ ಬಂಧನ ಇದೆಂದು ಅವರು ಹೇಳಿದ್ದಾರೆ.
ಫೈರ್ ಸ್ಟಾರ್ ಇಂಟರ್ನ್ಯಾಷನಲ್, ಫೈರ್ ಸ್ಟಾರ್ ಡೈಮಂಡ್ ಇಂಟರ್ನ್ಯಾಷನಲ್ ನಲ್ಲಿ ಮೋಸದ ವ್ಯವಹಾರ ನಡೆಸಿರುವ ಆರೋಪವನ್ನು ವಾಧ್ವಾ ಮೇಲೆ ಹೊರಿಸಲಾಗಿದೆ. ಫೆಬ್ರವರಿಯಲ್ಲಿ ಬೆಳಕು ಕಂಡ ಪಿಎನ್ಬಿ ಯ 13,500 ಕೋಟಿ ವಂಚನೆ ಪ್ರಕರಣದಲ್ಲಿ ವಾಧ್ವಾ ಪ್ರಮುಖ ಪಾಲುದಾರರಾಗಿದ್ದರು.
ನೀರವ್ ಮೋದಿಗೆ ಸೇರಿದ್ದ 36 ಕೋಟಿ ರೂ ಮೌಲ್ಯದ ಅಮೂಲ್ಯ ವಸ್ತುಗಳನ್ನು ಇಡಿ ಮಾರ್ಚ್ 24 ರಂದು ವಶಕ್ಕೆ ಪಡೆದಿತ್ತು. ಅಲ್ಲದೆ ಕಳೆದ ಮೂರು ದಿನಗಳಿಂದ ಮುಂಬೈನ ನೀರವ್ ಮೋದಿಯ ಭವ್ಯ ಬಂಗಲೆ ಸಮುದ್ರ ಮಹಲ್' ನಿವಾಸದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಜತೆಗೂಡಿ ಇಡಿ ತನಿಖೆ ನಡೆಸುತ್ತಿದೆ.
ನೀರವ್ ಮೋದಿ ಹಾಗೂ ಗೀತಾಂಜಲಿ ಗ್ರೂಪ್ಸ್ ಮಾಲೀಕ ಮೆಹುಲ್ ಚೋಕ್ಸಿ ವಿರುದ್ಧ ಪಿಎನ್ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾದ ನಂತರ ಇಡಿ ಮತ್ತು ಸಿಬಿಐ ಜಂಟಿಯಾಗಿ ತನಿಖೆ ಕೈಗೊಂಡಿದೆ. ಪಿಎನ್ಬಿ ನೀರವ್ ಮೋದಿ ವಿರುದ್ಧ ಮೊದಲ ಬಾರಿ ದೂರು ಸಲ್ಲಿಸುವ ಮುನ್ನವೇ, ಜನವರಿಯಲ್ಲಿ ಮೋದಿ ಹಾಗೂ ಚೋಕ್ಸಿ ವಿದೇಶಕ್ಕೆ ಪಲಾಯನ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಇಡಿ ಇದುವರೆಗೆ ದೇಶದಾದ್ಯಂತ 251 ಆಸ್ತಿಗಳನ್ನು ಹುಡುಕಿದ್ದು ವಜ್ರ, ಚಿನ್ನ, ಮುತ್ತುಗಳು ಸೇರಿದಂತೆ ಇನ್ನಿತರೆ ಅಮೂಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದೆ