ನವದೆಹಲಿ: ವಿಧಾನಸಭೆ ಚುನಾವಣೆ ಹಿನ್ನಲೆ ಕರ್ನಾಟಕ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರತ್ಯೇಕ ನಾಡಧ್ವಜಕ್ಕಾಗಿ ಆ ರಾಜ್ಯ ಸಲ್ಲಿಸಿರುವ ಪ್ರಸ್ತಾವನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
ನಾಡಧ್ವಜಕ್ಕೆ ಅನುಮತಿ ನೀಡಿವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಪ್ರತ್ಯೇಕ ನಾಡಧ್ವಕ್ಕಾಗಿ ಕರ್ನಾಟಕ ಸಲ್ಲಿಸಿರುವ ಬೇಡಿಕೆಯನ್ನು ಸ್ವೀಕರಿಸಲಾಗಿದೆ. ಆದರೆ, ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪರಿಗಣನೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದೆ.
ತಮ್ಮನ್ನು ಕನ್ನಡಿಗನೆಂದು ಘೋಷಿಸಿಕೊಕಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಕನ್ನಿಡನಾಗುವುದೆಂದರೆ, ಕನ್ನಡ ಭಾಷೆ, ನಾಡಗೀತೆ, ನಾಡಧ್ವಗಳನ್ನು ಒಪ್ಪಿಕೊಳ್ಳುವುದು ಎಂದರ್ಥ. ನೀವು ಕರ್ನಾಟಕದ ನಾಡಧ್ವಜಕ್ಕೆ ಅನುಮತಿ ನೀಡಿ, ನೈಜ ಕನ್ನಡಿಗನೆನಿಸಿಕೊಳ್ಳುವಿರೇ? ಉತ್ತರ ಕೊಂಡಿ ಮೋದಿ... ಎಂದು ಈ ಹಿಂದೆ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದರು.
ಕಳೆದ ಮಾರ್ಚ್ ನಲ್ಲಿ ರಾಜ್ಯ ಸರ್ಕಾರ ಹೊಸ ಅಧಿಕೃತ ನಾಡಧ್ವಜವನ್ನು ಅನಾವರಣಗೊಳಿಸಿತ್ತು. ಹೊಸ ನಾಡಧ್ವಜದಲ್ಲಿ ಹಳದಿ, ಬಿಳಿ ಮತ್ತು ಕೆಂಪು ಬಣ್ಣಗಳಿದ್ದು, ಧ್ವಜ ಮಧ್ಯಭಾಗದಲ್ಲಿ ರಾಜ್ಯದ ಗಂಡಭೇರುಂಡ ಲಾಂಛನವಿದೆ. ಪ್ರತ್ಯೇಕ ನಾಡಧ್ವಜಕ್ಕೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿರುವುದರಿಂದ ಕೆಲ ದಿನಗಳ ಹಿಂದಷ್ಟೇ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ರಾಜ್ಯ ಸರ್ಕಾರದ ಈ ನಡೆ ಸಾಕಷ್ಟು ಪರ ಹಾಗೂ ವಿರೋಧಗಳಿಗೆ ಕಾರಣವಾಗಿದೆ.