ದೇಶ

ರಾಷ್ಟ್ರಪತಿ ಬದಲು ಸ್ಮೃತಿ ಇರಾನಿಯಿಂದ ಪ್ರಶಸ್ತಿ ವಿತರಣೆ: ಸಮಾರಂಭ ತಿರಸ್ಕರಿಸಲು ಕಲಾವಿದರು ನಿರ್ಧಾರ

Sumana Upadhyaya

ನವದೆಹಲಿ: ಸಾಂಪ್ರದಾಯಿಕತೆಯನ್ನು ಮುರಿದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೇವಲ 11 ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸುವುದರಿಂದ ಉಳಿದ ಪ್ರಶಸ್ತಿಗಳನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ನೀಡುವುದನ್ನು ವಿರೋಧಿಸಿ ಇಂದು ಸಂಜೆ ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರುಹಾಜರಾಗಲು 60ಕ್ಕೂ ಹೆಚ್ಚು ಕಲಾವಿದರು ನಿರ್ಧರಿಸಿದ್ದಾರೆ.

ರಾಷ್ಟ್ರಪತಿಯವರು ಪ್ರಶಸ್ತಿ ನೀಡದಿರುವುದು ಬೇಸರ ತರಿಸಿದೆ ಎಂದು ದೇಶಾದ್ಯಂತದಿಂದ ಕಲಾವಿದರು ಚಿತ್ರೋತ್ಸವ ನಿರ್ದೇಶನಾಲಯ, ರಾಷ್ಟ್ರಪತಿಗಳ ಕಚೇರಿ ಮತ್ತು ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಪತಿಯವರು ಕೇವಲ 11 ಪ್ರಶಸ್ತಿಗಳನ್ನು ಮಾತ್ರ ನೀಡುತ್ತಾರೆ ಎಂದು ಕೊನೆ ಕ್ಷಣದಲ್ಲಿ ಕೇಳಿ ಬಹಳ ನೋವಾಗಿದೆ.ಉಳಿದವರಿಗೆ ಮಾಹಿತಿ ಖಾತೆ ಸಚಿವೆ ಸ್ಮೃತಿ ಇರಾನಿ ನೀಡುತ್ತಾರೆ ಎಂದು ಗೊತ್ತಾಯಿತು. ಶಿಷ್ಟಾಚಾರ ಪಾಲಿಸುವ ಒಂದು ಸಮಾರಂಭ ಅಥವಾ ಸಂಸ್ಥೆಯ ಬಗ್ಗೆ ಪೂರ್ವ ಸೂಚನೆ ನೀಡದೆ ಕೊನೆ ಕ್ಷಣದಲ್ಲಿ ಬದಲಾವಣೆ ತಂದರೆ ನಂಬಿಕೆ ಹೊರಟುಹೋಗುತ್ತದೆ. 65 ವರ್ಷಗಳ ಸಂಪ್ರದಾಯವನ್ನು ಒಮ್ಮೆಲೆ ಮುರಿದಿರುವುದು ಬೇಸರದ ಸಂಗತಿ ಎಂದು ಕಲಾವಿದರು ಪತ್ರದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ವಿಷಯದ ಕುರಿತು ನಿನ್ನೆ ಸಚಿವೆ ಸ್ಮೃತಿ ಇರಾನಿ ಜೊತೆ ಮಾತುಕತೆ ನಡೆಸಿದ್ದು ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.

ನಮ್ಮ ಬೇಡಿಕೆಗೆ, ಬೇಸರಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ ಸಮಾರಂಭಕ್ಕೆ ಗೈರುಹಾಜರಾಗುವುದು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ. ನಮಗೆ ಸಮಾರಂಭವನ್ನು ಬಹಿಷ್ಕರಿಸಬೇಕೆಂಬ ಉದ್ದೇಶವಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಸಿಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಕಲಾವಿದರು ಪತ್ರದಲ್ಲಿ ಹೇಳಿದ್ದಾರೆ.

SCROLL FOR NEXT