ನವದೆಹಲಿ: ಕೇರಳದ ಕಣ್ಣೂರಿನಲ್ಲಿ ಮತ್ತೆ ಸೈದ್ಧಾಂತಿಕ, ರಾಜಕೀಯ ವಿಷಯಕ್ಕಾಗಿ ಹತ್ಯೆಗಳು ನಡೆದಿದ್ದು, ಸಿಪಿಐಎಂ ಕಾರ್ಯಕರ್ತನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಆರ್ ಎಸ್ಎಸ್ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ.
ಸಿಪಿಐಎಂ ಕಾರ್ಯಕರ್ತನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಆರ್ ಎಸ್ಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆಗೊಳಗಾಗಿದ್ದ ಕಾರ್ಯಕರ್ತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಕಾರ್ಯಕರ್ತ, ಮಾಜಿ ಕೌನ್ಸಿಲರ್ ಕೆ ಬಾಬು ಹತ್ಯೆ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಪಿಐಎಂ, ಆರ್ ಎಸ್ ಎಸ್ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರವನ್ನು ನಿಲ್ಲಿಸಲು ಸಿದ್ಧವಿಲ್ಲ ಎಂದು ಆರೋಪಿಸಿದೆ.
ಬಾಬು ಹತ್ಯೆಯನ್ನು ಖಂಡಿಸಿ ಸಿಪಿಐಎಂ ಕಣ್ಣೂರು ಬಂದ್ ಗೆ ಕರೆ ನೀಡಿದೆ. ಇದೇ ವೇಳೆ ಮತ್ತೊಂದು ಘಟನೆಯಲ್ಲಿ ಆರ್ ಎಸ್ಎಸ್ ನಾಯಕ ಶನೋಜ್ ಎಂಬಾತ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆರ್ ಎಸ್ಎಸ್ ಕಾರ್ಯಕರ್ತನ ಹತ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪರಾಧಿಗಳಿಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.