ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ 'ಮನ್ ಕಿ ಬಾತ್'ನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ 54ನೇ ಪುಣ್ಯತಿಥಿಯ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸುತ್ತ ವೀರ್ ಸಾವರ್ಕರ್ ಅವರನ್ನು ಹಾಡಿ ಹೊಗಳಿದ್ದಾರೆ.
ಇಂದು ತಮ್ಮ 44ನೇ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಮೋದಿ, ಇಂದು ಮೇ 27, ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪುಣ್ಯತಿಥಿ. ಪಂಡಿತ್ ಜಿಗೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಇದೇ ತಿಂಗಳಲ್ಲಿ ನಾವು ಮತ್ತೊಬ್ಬ ವ್ಯಕ್ತಿಯನ್ನು ನೆನಪಿಸಿಕೊಳ್ಳಬೇಕಾಗಿದೆ. ಅದು ವೀರ್ ಸಾವರ್ಕರ್((ಮೇ 28, ವೀರ್ ಸಾವರ್ಕರ್ ಜನ್ಮದಿನ)) ಎಂದರು.
ಸಾವರ್ಕರ್ ಅವರು ಪ್ರತಿಭಾವಂತ ಬರಹಗಾರ ಮತ್ತು ಸಮಾಜ ಸುಧಾರಕ ಎಂದು ಸ್ಮರಿಸಿದ ಪ್ರಧಾನಿ ಮೋದಿ, ಮೇ ತಿಂಗಳಿಗೂ 1857ರಲ್ಲಿ ನಡೆದ ಐತಿಹಾಸಿಕ ಘಟನೆಗೂ ಸಂಬಂಧವಿದೆ. ಆ ವರ್ಷದಲ್ಲಿ ನಡೆದ ಹೋರಾಟವನ್ನು ಕೆಲವರು ಕೇವಲ ‘ಸಿಪಾಯಿ ದಂಗೆ’ ಎಂದು ಕರೆದರು. ಆದರೆ, ಅದನ್ನು ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಹೆಸರಿಸಿದ ಸಾವರ್ಕರ್ ಅವರನ್ನು ನಾನು ಗೌರವಿಸುತ್ತೇನೆ ಎಂದರು.
ಸಾವರ್ಕರ್ ಅವರು ಶೌರ್ಯ ಮತ್ತು ಬ್ರಿಟಿಷರ್ ವಿರುದ್ಧದ ಹೋರಾಟಕ್ಕೆ ಹೆಸರುವಾಸಿಯಾಗಿದ್ದರು ಎಂದು ಪ್ರಧಾನಿ ಹೇಳಿದ್ದಾರೆ.
ಇದೇ ವೇಳೆ ಈದ್(ರಂಜಾನ್) ನಮ್ಮ ಸಮಾಜದಲ್ಲಿನ ಸದ್ಭಾವನೆಯ ಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಧಾನಿ, ಎಲ್ಲರೂ ಸಂತೋಷ ಮತ್ತು ಉತ್ಸಾಹದಿಂದ ಈದ್ ಆಚರಣೆ ಮಾಡಲಿದ್ದಾರೆ ಎಂಬ ಭರವಸೆ ಮತ್ತು ನಂಬಿಕೆ ಇದೆ. ನಿಮ್ಮಲ್ಲರಿಗೂ ಹಬ್ಬದ ಹೃತ್ಪೂರ್ವಕ ಶುಭಾಶಯಗಳನ್ನು ಹೇಳಿದ್ದಾರೆ.