ಮುಂಬೈ: ನೌಕಾದಳದ ಕ್ಯಾಂಟೀನ್ ನಲ್ಲಿ ಉದ್ಯೋಗ ದೊರಕಿಸುವ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ನಿವೃತ್ತ ಸೇನಾ ಕ್ಯಾಪ್ಟನ್ ಓರ್ವನನ್ನು ಮುಂಬೈ ಪೋಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಶನಿವಾರ ಆರು ಮಂದಿ ಕ್ಯಾಂಟೀನ್ ಉದ್ಯೋಗಕ್ಕಾಗಿ ತಮಗೆ ದೊರೆತ ನೇಮಕಾತಿ ಪತ್ರ (ಅಪಾಯಿಂಟ್ ಮೆಂಟ್ ಲೆಟರ್) ನೊಡನೆ ಕ್ಷಿಣ ಮುಂಬೈಯ ರಕ್ಷಣಾ ಆಡಿಟ್ ನಿಯಂತ್ರಕ ಕಚೇರಿಯನ್ನು ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
"ಅಭ್ಯರ್ಥಿಗಳು ದೆಹಲಿಯಿಂದ ಈ ಪತ್ರಗಳನ್ನು ಸ್ವೀಕರಿಸಿದ್ದಾರೆ. ನಾವು ಅದನ್ನು ಪರಿಶೀಲಿಸಲಾಗಿ ಅದೆಲ್ಲವೂ ನಕಲಿ ಪತ್ರವಾಗಿದೆ ಎನ್ನುವುದು ತಿಳಿದುಬಂದಿದೆ.ತಕ್ಷಣ ತನಿಖೆ ಕೈಗೊಂಡಾಗ ನಿವೃತ್ತ ಸೇನಾಧಿಕಾರಿಯೊಬ್ಬರು ಈ ಪ್ರಕರಣದ ಹಿಂದಿದ್ದಾರೆ ಎನ್ನುವುದು ಪತ್ತೆಯಾಗಿದೆ" ಪೋಲೀಸರು ಹೇಳಿದ್ದಾರೆ.
ಆರು ಮಂದಿಯೂ ವಿಶಾಖಪಟ್ಟಣದಲ್ಲಿನ ಸರಸ್ವತಿ ಡಿಫೆನ್ಸ್ ಅಕಾಡಮಿಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.ಈ ಸಂಸ್ಥೆಯನ್ನು ವೃತ್ತ ಕ್ಯಾಪ್ಟನ್ ಇಮಂದ್ರಿ ಶೈಲೇಂದ್ರನಾಥ್ ತ್ರಿನೇತ್ರ ಅವರು ನಿರ್ವಹಿಸುತ್ತಿದ್ದಾರೆ. ನಕಲಿ ನೇಮಕಾತಿ ಪತ್ರ ಪಡೆದ ಆರು ಮಂದಿ ತ್ರಿನೇತ್ರಾ ಅವರೈಗೆ ತಲಾ 6 ಲಕ್ಷ ರೂ ಪಾವತಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಸಧ್ಯ ತ್ರಿನೇತ್ರ ಅವರು ಮುಂಬೈನಲ್ಲಿದ್ದು ವಿಚಾರಣೆಗಾಗಿ ಅವರನ್ನು ಮುಂಬೈಗೆ ಕರೆತರಲಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಅವರು ಸುಳ್ಳು ಭರವಸೆ ನೀಡಿರುವುದು ನಮಗೆ ತಿಳಿದಿದ್ದು ಸಧ್ಯ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ (ಪತ್ತೆದಾರಿ), ಮುಂಬೈ. ದಿಲೀಪ್ ಸಾವಂತ್ ಹೇಳಿದ್ದಾರೆ.