ದೇಶ

ಶಬರಿಮಲೆ ವಿವಾದ: ತೀರ್ಪು ಮರುಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ, ಅರ್ಜಿಗಳ ವಿಚಾರಣೆ ಜನವರಿ 22ಕ್ಕೆ

Nagaraja AB

ನವದೆಹಲಿ: ಶಬರಿಮಲೆ ವಿವಾದಕ್ಕೆ ಸಂಬಂಧಿಸಿದ ತೀರ್ಪು ಮರು ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.  

ಜನವರಿ 22 ರಂದು ದೇಗುಲದ ಒಳಗಡೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಅವಕಾಶ ಕಲ್ಪಿಸುವ ತೀರ್ಪು ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿದೆ.

ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್  ನೇತೃತ್ವದಲ್ಲಿನ ನ್ಯಾಯಮೂರ್ತಿಗಳಾದ ಎನ್. ನಾರಿಮನ್, ಎ. ಎಂ. ಖನ್ವೀಲ್ ಕರ್, ಡಿ. ವೈ ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರಾ ಅವರನ್ನೊಳಗೊಂಡ  ಪೀಠದಿಂದ 49 ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಯಲಿದೆ.

10 ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ  ಪ್ರವೇಶಿಸಲು ಅವಕಾಶ ನೀಡಿ  ಸೆಪ್ಟೆಂಬರ್ 28 ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪುನರ್ ಪರಿಶೀಲನೆಗಾಗಿ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ

ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠದಲ್ಲಿ 4:1 ರ ಅನುಪಾನದಲ್ಲಿ ಎಲ್ಲಾ ಮಹಿಳೆಯರಿಗೂ ಶಬರಿಮಲೆ ಪ್ರವೇಶ ಕಲ್ಪಿಸುವ ತೀರ್ಪು ಪ್ರಕಟಿಸಲಾಗಿತ್ತು.

ಆದಾಗ್ಯೂ, ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಅಯ್ಯಪ್ಪ ಭಕ್ತಾಧಿಗಳು ಹಾಗೂ  ಬಲಪಂಥೀಯ ಸಂಘಟನೆಗಳಿಂದ  ಬೃಹತ್ ಪ್ರತಿಭಟನೆ ನಡೆಸಲಾಗಿತ್ತು .

ಇಬ್ಬರು ಪತ್ರಕರ್ತೆಯರೂ ಸೇರಿದಂತೆ ಒಟ್ಟು 14 ಮಹಿಳೆಯರು ಪೊಲೀಸರ ಭದ್ರತೆಯಲ್ಲಿ ದೇಗುಲ ಪ್ರವೇಶಿಸಲು ಯತ್ನಿಸಿದರಾದರೂ ಮಧ್ಯದಾರಿಯಲ್ಲಿಯೇ ಅವರನ್ನು ತಡೆದ ಭಕ್ತಾಧಿಗಳು ಬಲವಂತದಿಂದ ಹಿಂದಕ್ಕೆ ಕಳುಹಿಸಿದ್ದರು.

SCROLL FOR NEXT