ಅಮೃತಸರದ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ನಡೆದಿರುವ ಸ್ಫೋಟ ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿದ್ದಂತೆಯೇ ಇತ್ತ ಪಂಜಾಬ್ ಮುಖ್ಯಮಂತ್ರಿಗಳೂ ಸಹ ಭಯೋತ್ಪಾದಕರ ಕೃತ್ಯವಾಗಿರುವುದನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.
ಐಎಸ್ಐ ಬೆಂಬಲಿತ ಖಾಲಿಸ್ತಾನಿ ಭಯೋತ್ಪಾದಕರ ಗುಂಪು ಅಥವಾ ಕಾಶ್ಮೀರಿ ಭಯೋತ್ಪಾದಕರ ಗುಂಪಿನ ಕೈವಾಡವನ್ನು ತಳ್ಳಿ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಕಷ್ಟಪಟ್ಟು ಉಳಿಸಿಕೊಂಡಿರುವ ಶಾಂತಿಯುತ ವಾತಾವರಣವನ್ನು ಹಾಳುಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಮರಿಂದರ್ ಸಿಂಗ್ ಇದೇ ವೇಳೆ ಹೇಳಿದ್ದು, ಮೃತರ ಕುಟುಂಬ ಸದಸ್ಯರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಸ್ಫೋಟ ಕೃತ್ಯದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಅಮರಿಂದರ್ ಸಿಂಗ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸುಳಿವು ಲಭಿಸಿದ್ದು, ಇಬ್ಬರು ವ್ಯಕ್ತಿಗಳು ಪಿಸ್ತೂಲ್ ಹಿಡಿದ ನಿರಾನ್ಕಾರಿ ಭವನದ ಬಳಿ ನುಗ್ಗುತ್ತಿರುವುದು, ಗ್ರೆನೇಡ್ ನ್ನು ಪ್ರಾರ್ಥನಾ ಸಭೆಯನ್ನು ಗುರಿಯಾಗಿರಿಸಿಕೊಂಡು ಎಸೆದು ಪರಾರಿಯಾಗಿರುವುದು ತನಿಖಾ ತಂಡಕ್ಕೆ ಪತ್ತೆಯಾಗಿದೆ.