ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಭೋಪಾಲ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ 2016ರಲ್ಲಿ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತು ಕಟುವಾಗಿ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿರುಗೇಟು ನೀಡಿದ್ದು, 'ನನಗೂ ಹಿಂದಿ ಅರ್ಥವಾಗುತ್ತದೆ' ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪತ್ರಕರ್ತನೊಬ್ಬ ರಕ್ಷಣಾ ಸಚಿವರಿಗೆ ಪ್ರಶ್ನೆಯೊಂದನ್ನು ಕೇಳಿದ್ದು, ಸರ್ಜಿಕಲ್ ಸ್ಟ್ರೈಕ್ ಕುರಿತು 2 ವರ್ಷಗಳ ಬಳಿಕವೂ ಎನ್'ಡಿಎ ಸರ್ಕಾರ ಟಾಮ್-ಟಾಮ್ (ಬಾಯಿ ಬಾಯಿ ಹೊಡೆದುಕೊಳ್ಳುತ್ತಿದೆ) ಮಾಡುತ್ತಿದೆ ಎಂದು ಕೇಳಿದರು.
ಇದಕ್ಕೆ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ ಸೀತಾರಾಮನ್ ಅವರು, ಅತ್ಯಂತ ಕಟು ದನಿಯಲ್ಲಿ ನೀವು ಪ್ರಶ್ನೆಯನ್ನು ಕೇಳಿದ್ದೀರಿ. ನೀವು 'ಬಿನ್ ಬಜಾಯೆ' (ಟಾಮ್-ಟಮಿಂಗ್) ಪದ ಬಳಕೆ ಮಾಡಿದಿರಿ. ನನಗೂ ಹಿಂದಿ ಅರ್ಥವಾಗುತ್ತದೆ ಎಂದು ತಿಳಿಸಿದರು.
ಸೈನಿಕರ ಹಿತಾಸಕ್ತಿ ಸಂಬಂಧಿಸಿದ್ದರೆ ಕಾರ್ಯಾಚರಣೆ ಸಾರ್ವಜನಿಕವಾದರೆ ಅದು ಆಕ್ಷೇಪಣೀಯವಾಗುತ್ತದೆ. ಇಂತಹ ಕಾರ್ಯಾಚರಣೆಯನ್ನು ಕಾಂಗ್ರೆಸ್ ಸರ್ಕಾರ ಹಿಂದೆಂದೂ ನಡೆಸಿಯೇ ಇಲ್ಲವೇ ಎಂದು ಪತ್ರಕರ್ತ ಪ್ರಶ್ನಿಸಿದ್ದಾರೆ.
ಪ್ರತೀಯೊಬ್ಬ ನಾಗರೀಕ ಕೂಡ ಅದನ್ನು ವೈಭವೀಕರಿಸಬಹುದು. ಶತ್ರುಗಳ ವಿರುದ್ಧ ದಾಳಿ ನಡೆಸಿದ್ದಕ್ಕೆ ನಾವು ನಾಚಿಕೆಪಡಬೇಕೆ? ಶತ್ರುಗಳು ಉಗ್ರರ ಸಹಾಯದೊಂದಿಗೆ ನಮ್ಮ ಯೋಧರ ಮೇಲೆ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ನಾವು ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದೆವು. ತಮ್ಮ ಮಾತೃಭೂಮಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ನಮ್ಮ ಯೋಧರ ಕುರಿತು ನಾವು ಹೆಮ್ಮೆ ಪಡಬೇಕು. ನಿಮ್ಮ ಕಟು ದನಿಯಲ್ಲಿದ್ದ ಪ್ರಶ್ನೆ ನನಗೆ ನೋವುಂಟು ಮಾಡಿದೆ.
ಒಂದು ವೇಳೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಕೂಡ ಇಂತಹದ್ದೇ ದಾಳಿಗಳನ್ನು ನಡೆಸಿದ್ದರೆ, ಅವರು ಅದನ್ನು ವೈಭವೀಕರಿಸಬೇಕಿತ್ತು. ಇದು ದೇಶದ ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos