ಡಮ್ಮಿ ಗೊಂಬೆಗಳ ಬಳಸಿ ಸೇನೆ ದಿಕ್ಕು ತಪ್ಪಿಸಲು ಯತ್ನ: ಇದು ನಕ್ಸಲರ ಹೊಸ ತಂತ್ರ
ನವದೆಹಲಿ: ಛತ್ತೀಸ್ಗಢದಲ್ಲಿ ನಕ್ಸಲರ ಅಟ್ಟಹಾಸ ಹೆಚ್ಚಾಗಿದೆ. ತಮ್ಮ ವಿರುದ್ಧ ಕಾರ್ಯಾಚರಣೆ ನಡೆಸುವ ಭದ್ರತಾ ಪಡೆಗಳ ದಿಕ್ಕು ತಪ್ಪಿಸಲು ಹೊಸ ತಂತ್ರಗಳನ್ನು ರೂಪಿಸಿರುವ ನಕ್ಸಲರು ಇದೀಗ ಅರಣ್ಯ ಪ್ರದೇಶಗಳಲ್ಲಿ ಡಮ್ಮಿ ಗೊಂಬೆಗಳ ಬಳಕೆ ಮಾಡುತ್ತಿವೆ.
ಛತ್ತೀಸ್ಗಢದ ಸುಕ್ಮಾದಲ್ಲಿರುವ ಅರಣ್ಯ ಪ್ರದೇಶವೊಂದರ ಸಿಆರ್'ಪಿಎಫ್ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಡಮ್ಮಿ ಗೊಂಬೆಗಳನ್ನು ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗೊಂಬೆಗಳು ನಿಜವಾದ ಮನುಷ್ಯರಂತೆ ದೂರದಲ್ಲಿ ಕಾಣಿಸುತ್ತಿದ್ದು, ಮರಗಳ ಹಿಂದೆ ನಕ್ಸಲರು ಅವಿತುಕೊಂಡಿರುವಂತೆ ಗೊಂಬೆಗಳನ್ನು ಕಟ್ಟಲಾಗಿದೆ.
ಕಾರ್ಯಾಚರಣೆ ವೇಳೆ ಇದೇ ರೀತಿಯ ಹಲವು ಗೊಂಬೆಗಳನ್ನು ಯೋಧರು ವಶಕ್ಕೆ ಪಡೆದುಕೊಂಡಿದ್ದು, ಒಂದು ಗೊಂಬೆಯಲ್ಲಿ ಐಇಡಿ ಅಳವಡಿಸಿದ್ದಾರೆ. ಪರಿಶೀಲನೆ ವೇಳೆ ಐಇಡಿ ಇರುವುದನ್ನು ಕಂಡುಕೊಂಡ ಸೇನಾಪಡೆ ನಂತರ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.
ಒಟ್ಟು ಮೂರು ಗೊಂಬೆಗಳಲ್ಲಿ ನಕ್ಸಲರು ಐಇಡಿ ಅಳವಡಿಸಿದ್ದರು. ಆರಂಭದಲ್ಲಿ ಡಮ್ಮಿ ಗೊಂಬೆಗಳನ್ನು ನೋಡಿ ನಾವು ನಕ್ಸಲರೇ ಎಂದುಕೊಂಡಿದ್ದವು. ಕೂಡಲೇ ಸ್ಥಳವನ್ನು ಸುತ್ತುವರೆದು ಕಾರ್ಯಾಚರಣೆ ಚುರುಕುಗೊಳಿಸಿದ್ದೆವು. ನಂತರ ಸ್ಥಳದ ಹತ್ತಿರ ಹೋದಾಗ ಅದು ಗೊಂಬೆಗಳೆಂಬುದು ತಿಳಿಯಿತು. ಗೊಂಬೆಗಳ ಕೈಗಳಲ್ಲಿ ಮರಗಳಿಂದ ಮಾಡಿದ ಶಸ್ತ್ರಾಸ್ತ್ರಗಳನ್ನು ಇಡಲಾಗಿತ್ತು ಎಂದು ಸಿಆರ್'ಪಿಎಪ್ 150ನೇ ಬೆಟಾಲಿಯನ್ ಕಮಾಂಡೆಂಟ್ ಡಿ.ಸಿಂಗ್ ಅವರು ಹೇಳಿದ್ದಾರೆ.
ಭೀತಿ ಹುಟ್ಟಿಸಲು ಹಾಗೂ ಸೇನೆಯ ದಿಕ್ಕು ತಪ್ಪಿಸಲು ನಕ್ಸಲು ಈ ರೀತಿಯ ಹೊಸ ತಂತ್ರವನ್ನು ರೂಪಿಸಿದ್ದಾರೆಂದು ತಿಳಿಸಿದ್ದಾರೆ.
ಸೋಮವಾರ ಸುಕ್ಮಾದ ಸಕ್ಲಾರ್ ಎಂಬ ಗ್ರಾಮದಲ್ಲಿ ಭಾರೀ ಕಾರ್ಯಾಚರಣೆ ನಡೆಸಿದ್ದ ಸೇನೆ ಒಟ್ಟು 8 ಮಂದಿ ನಕ್ಸಲರನ್ನು ಹತ್ಯೆ ಮಾಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos