ವಿಜಯವಾಡ: ಅಮೆರಿಕಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗೀತಂ ವಿಶ್ವವಿದ್ಯಾಲಯದ ನಿರ್ದೇಶಕ ಹಾಗೂ ಆಂಧ್ರಪ್ರದೇಶ ರಾಜ್ಯ ಎಂಎಲ್'ಸಿ ಎಂವಿವಿಎಸ್ ಮೂರ್ತಿಯವರು ಮೃತಪಟ್ಟಿದ್ದಾರೆಂದು ಬುಧವಾರ ತಿಳಿದುಬಂದಿದೆ.
ನಾಲ್ವರೊಂದಿಗೆ ಮೂರ್ತಿಯವರು ಕ್ಯಾಲಿಫೋರ್ನಿಯಾದಿಂದ ಅಲಸ್ಕಾಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ಬಳಿಕ ಕಾರಿನಲ್ಲಿದ್ದ ನಾಲ್ವರು ಹಾಗೂ ಮೂರ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತರನ್ನು ಬಸವ ಪುಣ್ಣಯ್ಯ, ವೀರಮಚಿನೇನಿ ಶಿವರಾಮಕೃಷ್ಣ ಮತ್ತು ವಿಬಿಆರ್ ಚೌಧರಿ ಎಂದು ಗುರ್ತಿಸಲಾಗಿದೆ. ಮೂರ್ತಿಯವರು ಅಮೆರಿಕಾದಲ್ಲಿ ಅ.6 ರಂದು ಗೀತಂ ಅಲೂಮ್ನಿ ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕಾ (ಜಿಎಎನ್ಎಎಂ) ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗುವ ಸಲುವಾಗಿ ಭೇಟಿ ನೀಡಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಡಾ.ಮುತ್ತುಕುಮಿಲಿ ವೀರ ವೆಂಕಟ ಸತ್ಯನಾರಾಯಣ ಮೂರ್ತಿವರು ಎಂವಿವಿಎಸ್ ಮೂರ್ತಿಯೆಂದೇ ಖ್ಯಾತಿ ಪಡೆದಿದ್ದರು.