ದೇಶ

ಅಮೃತಸರ ರೈಲು ದುರಂತ: ಸಾಯುವ ಮುನ್ನ ಹಲವರ ಜೀವ ಉಳಿಸಿದ ರಾವಣ ವೇಷಧಾರಿ

Lingaraj Badiger
ಅಮೃತಸರ: ದಸರಾ ಹಬ್ಬದ ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ವೇಷ ಧರಿಸುತ್ತಿದ್ದ 24 ವರ್ಷ ದಲ್ಬೀರ್ ಸಿಂಗ್ ರಾವಣ ದಹನ ವೀಕ್ಷಿಸುತ್ತಿದ್ದ ಹಲವರ ಪ್ರಾಣ ಉಳಿಸಿದ್ದಾನೆ. ಆದರೆ ತನ್ನ ಜೀವ ಉಳಿಸಿಕೊಳ್ಳಲಾಗದೇ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.
ನೂರಾರು ಜನರೊಂದಿಗೆ ತಾನೂ ರಾವಣ ದಹನ ವೀಕ್ಷಿಸುತ್ತಿದ್ದ ದಲ್ಬಿರ್ ಸಿಂಗ್, ರೈಲು ಬರುತ್ತಿರುವುದನ್ನು ಗಮನಿಸಿ, ಎಲ್ಲರಿಗೂ ಹಳಿ ಬಿಟ್ಟು ಹೋಗುವಂತೆ ಕೂಗಿ ಹೇಳಿದ್ದಾರೆ. ಅಲ್ಲದೆ ಹಲವರನ್ನು ಹಳಿಯಿಂದ ಹೊರಗೆ ತಳ್ಳಿದ್ದಾರೆ. ಆದರೆ ತಾನು ಹಳಿಯಿಂದ ಹೊರಬರಲಾಗದೇ ಮೃತಪಟ್ಟಿದ್ದಾರೆ.
ರೈಲು ದುರಂತದಲ್ಲಿ ದಲ್ಬೀರ್ ಸಿಂಗ್ ಸೇರಿದಂತೆ 61 ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಳಿಪಟ ನಿರ್ಮಾಣ ಮಾಡುವ ದಲ್ಬೀರ್ ಸಿಂಗ್ ಅವರು ತಮ್ಮ ಮನೆಯಲ್ಲಿ ಅಂಗಡಿ ಹೊಂದಿದ್ದು, ತಾಯಿ, ಪತ್ನಿ ಹಾಗೂ 8 ತಿಂಗಳ ಮಗುವನ್ನು ಅಗಲಿದ್ದಾರೆ.
ದುರಂತದ ನಂತರ ವಿಧವೆ ಸೊಸೆಗೆ ಸರ್ಕಾರ ಉದ್ಯೋಗ ನೀಡುವಂತೆ ದಲ್ಬೀರ್ ಸಿಂಗ್ ತಾಯಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
SCROLL FOR NEXT