ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ #MeToo ಆರೋಪಗಳು ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದ್ದು, ಇದೀಗ ಚಿತ್ರರಂಗದ ಗಣ್ಯರು ಈ ವಿವಾದಕ್ಕೆ ತೆರೆ ಎಳೆಯಲು ಹರಸಾಹಸ ಪಡುತ್ತಿದ್ದಾರೆ.
ಈಗಾಗಲೇ ಮೀಟೂ ಸಂಬಂಧ ಅರ್ಜುನ್ ಸರ್ಜಾ ಮಾವ ನಟ ರಾಜೇಶ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ಸಂಬಂಧ ವಿಚಾರಣೆ ಪ್ರಗತಿಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ನಟಿ ಶೃತಿ ಹರಿಹರನ್ ಗೆ ಸಾಕ್ಷ್ಯ ನೀಡುವಂತೆ ಕೇಳಿದ್ದು, ಅದಕ್ಕೂ ಮೊದಲೇ ವಿವಾದವನ್ನು ಇತ್ಯರ್ಥಗೊಳಿಸಲು ತೆರೆ ಹಿಂದೆ ಸಾಕಷ್ಟು ಪ್ರಯತ್ನಗಳು ನಡೆಯಲಾರಂಭಿಸಿವೆ.
ಇನ್ನು ನಟಿ ಶೃತಿಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ನಡುವೆ ಸಂಧಾನಕ್ಕಾಗಿ ಚಿತ್ರರಂಗದ ಗಣ್ಯರು ಮುಂದಾಗಿದ್ದು, ವಾಣಿಜ್ಯ ಮಂಡಳಿಯ ಈ ಹಿಂದಿನ ಅಧ್ಯಕ್ಷ ಸಾರಾಗೋವಿಂದು, ಹಾಲಿ ಅಧ್ಯಕ್ಷ ಚಿನ್ನೇಗೌಡ ಹಾಗೂ ನಟ ಅಂಬರೀಶ್ ನೇತೃತ್ವದಲ್ಲಿ ಸಂಧಾನ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬುಧವಾರ ನಟ ಅಂಬರೀಶ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದ್ದು, ಈ ವೇಳೆ ನಟಿ ಶೃತಿಹರಿಹರನ್ ಮತ್ತು ನಟ ಅರ್ಜುನ್ ಸರ್ಜಾರೊಂದಿಗೆ ಅಂಬರೀಶ್ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.