ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ್ ಚೌಹಾಣ್ ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ರಾಹುಲ್ ಪನಾಮಾ ಪೇಪರ್ಸ್ ಹಗರಣದಲ್ಲಿ ತಮ್ಮ ತಂದೆಯ ಹೆಸರು ಬಳಸಿದ್ದ ಕಾರಣ ಈ ಮೊಕದಮೆ ದಾಖಲು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕಾರ್ತಿಕೇಯ್ ಪರ ವಕೀಲರಾದ ಎಸ್.ಶ್ರೀವಾಸ್ತವ "ರಾಹುಲ್ ಪನಾಮಾ ಪೇಪರ್ಸ್ ಹಗರಣದಲ್ಲಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಹೆಸರನ್ನು ತಳುಕು ಹಾಕೌ ನೋಡುತ್ತಿದ್ದಾರೆ. ಇದು ಕ್ರಿಮಿನಲ್ ಉದ್ದೇಶದೊಂದಿಗೆ ನೀಡಿದ ಆಕ್ಷೇಪಾರ್ಹ ಹೇಳಿಕೆಯಾಗಿದೆ" ಎಂದರು.
ಸೋಮವಾರ ರಾತ್ರಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಹುಲ್ ಗಾಂಧಿ ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರನ್ನು ವ್ಯಾಪಂ ಹಾಗೂ ಪನಾಮಾ ಪೇಪರ್ಸ್ ಹಗರಣದಲ್ಲಿ ತಳುಕು ಹಾಕುತ್ತಿದ್ದು ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದರು.ಈ ಕುರಿತಂತೆ ಟ್ವೀಟ್ ಮಾಡಿದ್ದ ಚೌಹಾಣ್ ತಾನು ರಾಹುಲ್ ವಿರುದ್ಧ ಕ್ರಿಮಿನಲ್ ಮಾನನ್ಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಇದು ಕಾನೂನು ವಿಚಾರಣೆಯಲ್ಲಿ ತೀರ್ಮಾನವಾಗಲಿ ಎಂದಿದ್ದರು.
ಇದಕ್ಕೆ ಮುನ್ನ ಮಧ್ಯ ಪ್ರದೇಶ ಚುನಾವಣೆ ಪ್ರಚಾರದಲ್ಲಿದ್ದ ರಾಹುಲ್ ಗಾಂಧಿ ಪನಾಮಾ ಹಗರಣದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿಗಳ ಪುತ್ರನ ಹೆಸರಿದೆ ಎಂದು ಹೇಳಿದ್ದರು. ಅಲ್ಲದೆ ತಮ್ಮ ತಪ್ಪಿನ ಅರಿವಾದ ಬಳಿಕ ನಾನು ಗೊಂದಲಕ್ಕೀಡಾಗಿದ್ದೆ. ಪನಾಮಾ ಹಗರಣದಲ್ಲಿ ಭಾಗಿಯಾಗದ ಮಧ್ಯಪ್ರದೇಶ ಮುಖ್ಯಮಂತ್ರಿಗಳು ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಿದ್ದರು. ಇದು ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಹ ಇರುಸು ಮ್ರುಸನ್ನು ಉಂಟುಮಾಡಿತ್ತು.