ನವದೆಹಲಿ: ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನು ನೇಮಕ ಮಾಡುವಂತೆ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಧಿಕೃತ ಶಿಫಾರಸ್ಸು ಮಾಡಿದ್ದಾರೆ.
ಈ ಬಗ್ಗೆ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಸಿಜೆಐ ದೀಪಕ್ ಮಿಶ್ರಾ ಅವರು, ಭಾರತದ ಮುಖ್ಯ ನ್ಯಾಯಮೂರ್ತಿಗಳ ಆಯ್ಕೆ ಸೇವಾ ಹಿರಿತನದ ಆಧಾರದ ಮೇಲೆ ನಡೆಯಬೇಕು. ಹೀಗಾಗಿ ತಾವು ಸೇವಾ ಹಿರಿತನದಲ್ಲಿ ಹಿರಿಯರಾಗಿರುವ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ಹೆಸರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸೂಚಿಸುತ್ತಿದ್ದೇನೆ ಎಂದು ದೀಪಕ್ ಮಿಶ್ರಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ವಾಡಿಕೆಯಂತೆ ನಿರ್ಗಮಿತ ಸಿಜೆಐಗಳ ಶಿಫಾರಸ್ಸಿನಂತೆಯೇ ಮುಂದಿನ ಮುಖ್ಯ ನ್ಯಾಯಮೂರ್ತಿಗಳ ಆಯ್ಕೆ ನಡೆಯಲಿದ್ದು, ದೀಪಕ್ ಮಿಶ್ರಾ ಅವರ ಆಯ್ಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದೇ ಆದರೆ ರಂಜನ್ ಗಗೋಯ್ ಅವರು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಲಿದ್ದಾರೆ. ಇದೇ ಅಕ್ಟೋಬರ್ 2ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅವಧಿ ಪೂರ್ಣಗೊಳ್ಳಲಿದೆ.
ಅಕ್ಚೋಬರ್ 3ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮ ಅಕ್ಟೋಬರ್ 2ರಂದೇ ನಡೆಯಬೇಕಿತ್ತಾದರೂ, ಮಹಾತ್ಮಾ ಗಾಂಧಿ ಜಯಂತಿ ಇರುವ ಕಾರಣ ಅಕ್ಟೋಬರ್ 3ಕ್ಕೆ ಈ ಕಾರ್ಯಕ್ರಮವನ್ನು ನಿಗದಿ ಪಡಿಸಲಾಗಿದೆ.